ಪ್ರಜಾಸ್ತ್ರ ಸುದ್ದಿ
ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಹತ್ತಿರದ ನಾಲೆಗೆ ಶನಿವಾರ ರಾತ್ರಿ ಕಾರೊಂದು ಉರುಳಿಬಿದ್ದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ಈ ಘಟನೆ ಸಂಬಂಧ ಸಿಎಂ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದ್ದಾರೆ.
ಸಚಿವರಾದ ಹೆಚ್.ಸಿ ಮಹಾದೇವಪ್ಪ, ಚೆಲುವರಾಯಸ್ವಾಮಿ ಅವರು ಭಾನುವಾರ ಮಿಮ್ಸ್ ನ ಶವಗಾರಕ್ಕೆ ಭೇಟಿ ಕೊಟ್ಟು ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಪರಿಹಾರ ನೀಡಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಮಂಡ್ಯ ಹಾಗೂ ಮೈಸೂರು ಜಿಲ್ಲಾಧಿಕಾರಿಗಳು ಪರಿಹಾರಕ್ಕೆ ವರದಿ ನೀಡಲಿದ್ದಾರೆ ಅಂತಾ ತಿಳಿಸಿದರು.
ಅಲ್ಲದೇ, ಸಚಿವರು ವೈಯಕ್ತಿಕವಾಗಿ ತಲಾ 50 ಸಾವಿರ ರೂಪಾಯಿ ನೀಡಿದರು. ನಾಲೆಗಳಿಗೆ ಎಲ್ಲೆಲ್ಲಿ ತಡೆಗೋಡೆ ಇಲ್ಲ ಅನ್ನೋದು ಗುರುತಿಸಿ ತಡೆಗೋಡೆ ನಿರ್ಮಿಸಲಾಗುವುದು ಎಂದು ಹೇಳಿದರು. ಆದಿಚುಂಚನಗಿರಿಯಲ್ಲಿ ಆಯೋಜಿಸಿದ್ದ ದೇವತಾ ಕಾರ್ಯಕ್ರಮಕ್ಕೆ ಸಂಬಂಧಿಕರು ಹೇಳಲು ಗೊರವನಹಳ್ಳಿಯಿಂದ ದೊಡ್ಡ ಮುಲಗೂಡು ಗ್ರಾಮಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ ರಾಮನಹಳ್ಳಿ ಗ್ರಾಮದ ಹತ್ತಿರದ ನಾಲೆಗೆ ಕಾರು ಶನಿವಾರ ರಾತ್ರಿ 8 ಗಂಟೆಯ ಸುಮಾರಿಗೆ ಉರುಳಿದೆ.
ಘಟನೆಯಲ್ಲಿ ಚಾಲಕ ಮನೋಜ್ ಅದೃಷ್ಟವಶಾತ್ ಬದುಕುಳಿದಿದ್ದಾನೆ. ಮಹದೇವಮ್ಮ, ರೇಖಾ, ಮಹಾದೇವಿ, ಬಾಲಕಿ ಸಂಜನಾ ಮೃತಪಟ್ಟಿದ್ದಾರೆ.