ಪ್ರಜಾಸ್ತ್ರ ಸುದ್ದಿ
ತುಮಕೂರು: ಒಡಿಶಾದಲ್ಲಿ ನಡೆದ ಸರಣಿ ರೈಲು ಅಪಾಘತದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡು ಸಾವಿರಾರು ಜನರು ಗಾಯಗೊಂಡಿದ್ದಾರೆ. ಈ ಘಟನೆಗೆ ವಿಶ್ವದ ನಾಯಕರಾದಿಯಾಗಿ ಎಲ್ಲರೂ ಸಂತಾಪ ಸೂಚಿಸಿದ್ದಾರೆ. ಶುಕ್ರವಾರ ಸಂಜೆ ನಡೆದ ಘಟನೆಯ ಬಗ್ಗೆ ಇನ್ನು ಸ್ಪಷ್ಟತೆಯಿಲ್ಲ. ಜನರ ಆಕ್ರಂದನ ಮುಂದುವರೆದಿದೆ. ಆದರೆ, ತುಮಕೂರು ಮೂಲದ ಬಿಜೆಪಿ ಕಾರ್ಯಕರ್ತೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ವಿವಾದಿತ ಪೋಸ್ಟ್ ಹಾಕಿದ್ದಾರೆ.
ಈ ರೈಲು ದುರಂತಕ್ಕೆ ಮಸೀದಿ ಕಾರಣವೆಂದು ಪೋಸ್ಟ್ ವೊಂದನ್ನು ಶಕುಂತಲಾ ಹೆಚ್.ಎಸ್ ಅನ್ನೋ ಬಿಜೆಪಿ ಕಾರ್ಯಕರ್ತೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್ ಆಗಿದ್ದು, ಕರ್ನಾಟಕ ಪೊಲೀಸರಿಂದ ಒಡಿಶಾ ಪೊಲೀಸರು ಈ ಮಹಿಳೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ. ಪೋಸ್ಟ್ ಡಿಲೀಟ್ ಮಾಡಿದ್ದರೂ ಸ್ಕ್ರೀನ್ ಶಾಟ್ ಎಲ್ಲೆಡೆ ವೈರಲ್ ಆಗಿದ್ದು, ಕಾನೂನು ಸಂಕಷ್ಟ ಎದುರಾಗಿದೆ.
ಶಾಂತಿ ಕದಡುವ ವಿಚಾರಗಳಿಗೆ ಜನರು ಕಿವಿಗೊಡಬೇಡಿ ಎಂದು ಪೊಲೀಸರು ಹೇಳುತ್ತಲೇ ಇದ್ದಾರೆ. ಇದರ ನಡುವೆ ಇಂತಹ ಕೆಲ ಕಿಡಿಗೇಡಿಗಳು ತಮ್ಮ ನೀಚತನ ತೋರಿಸುತ್ತಿದ್ದಾರೆ. ಅಪಘಾತದ ಸ್ಥಳದಿಂದ ಸ್ವಲ್ಪ ದೂರದಲ್ಲಿರುವುದು ಮಸೀದಿ ಅಲ್ಲ. ಇಸ್ಕಾನ್ ದೇವಸ್ಥಾನ ಎಂದು ತಿಳಿದು ಬಂದಿದೆ. ಆದರೆ, ದೇವಸ್ಥಾನದ ಅರ್ಧಭಾಗದ ಫೋಟೋ ಇಟ್ಟುಕೊಂಡು ಮಸೀದಿ ಎಂದು ಹೇಳಿ ಕೋಮು ಸಂಘರ್ಷ ಸೃಷ್ಟಿಸುವ ಕೆಲಸ ಮಾಡಿದವರ ವಿರುದ್ಧ ಕಠಿಣ ಕಾನೂನು ಶಿಕ್ಷೆಗೆ ಆಗ್ರಹಿಸಲಾಗಿದೆ.