ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ನಾಳೆ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ. ಈಗಾಗ್ಲೇ ಮಂಡ್ಯ, ಮದ್ದೂರು, ರಾಮನಗರ, ಮಳವಳ್ಳಿಯಲ್ಲಿ ಬಂದ್ ನಡೆಸಲು ತೀರ್ಮಾನಿಸಲಾಗಿದೆ. ಈ ಮೂಲಕ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಭಾನುವಾರ ನಡೆದ ಸಭೆಯಲ್ಲಿ ಮಂಗಳವಾರ ಬಂದ್ ನಡೆಸಲು ನಿರ್ಧರಿಸಲಾಗಿದೆ. ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕೊಟ್ಟಿರುವ ಬಂದ್ ಕರೆಗೆ 90ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಹೀಗಾಗಿ ನಾಳೆ ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆಯ ತನಕ ಸಿಲಿಕಾನ್ ಸಿಟಿ ಸ್ತಬ್ಧವಾಗಲಿದೆ.
ಮುಂಜಾನೆ 11 ಗಂಟೆಯಿಂದ ಪುರಭವನದಿಂದ ಪ್ರತಿಭಟನಾ ಮೆರವಣಿಗೆ ಶುರುವಾಗಲಿದೆ. ವಿವಿಧ ಕನ್ನಡಪರ, ರೈತಪರ ಸಂಘಟನೆಗಳು, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಬಿಬಿಎಂಪಿ ಕಾರ್ಮಿಕರು, ಓಲಾ, ಉಬರ್ ಚಾಲಕರ ಸಂಘ, ಕರ್ನಾಟಕ ಮರಾಠ ಮಂಡಳ ಹೀಗೆ ಹಲವು ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿವೆ. ಈ ಮೂಲಕ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಒಕ್ಕಟ್ಟಿನ ಧ್ವನಿ ಮೊಳಗಿಸಲಿವೆ.