ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವುದನ್ನು ಖಂಡಿಸಿ ಅಕ್ಟೋಬರ್ 10ರಂದು ಅತ್ತಿಬೆಲೆಯ ತಮಿಳುನಾಡು ಗಡಿ ಸೇರಿ ಎಲ್ಲ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲಾಗುವುದು ಎಂದು ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಅಕ್ಟೋಬರ್ 5ರಂದು ಕೆಆರ್ ಎಸ್ ತನಕ ಮೆರವಣಿಗೆ ನಡೆಸಲಿದ್ದೇವೆ. ಅಕ್ಟೋಬರ್ 10ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ. ತಮಿಳುನಾಡಿನವರು ಅರ್ಥ ಮಾಡಿಕೊಳ್ಳಬೇಕು. ಯುದ್ಧ ಮಾಡಿದಂತೆ ಮಾಡುತ್ತಾರೆ. ಮಾರುವೇಷದಲ್ಲಿ ಬಂದು ಕೆಆರ್ ಎಸ್ ನೋಡಿಕೊಂಡು ಹೋಗಲಿ ಎಂದರು.
ಸಂಸದರು ಧೈರ್ಯ ಮಾಡಿ ಈಗ್ಲಾದರೂ ರಾಜೀನಾಮೆ ಕೊಡಿ. ಇನ್ನಾರು ತಿಂಗಳಲ್ಲಿ ಚುನಾವಣೆ ಬರುತ್ತೆ. ಕಾವೇರಿ ವಿಚಾರದಲ್ಲಿ ರಾಜಕೀಯ ಬೇಡ. ಎರಡು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಯಿಸಿ ಪ್ರಧಾನಿ ಮೋದಿ ಅವರು ಮಾತನಾಡಲಿ. ಸಂಕಷ್ಟ ಸೂತ್ರದ ಬಗ್ಗೆ ತೀರ್ಮಾನವಾಗಲಿ ಎಂದು ವಾಟಾಳ್ ನಾಗರಾಜ್ ಹೇಳಿದರು.