ಬೆಳಗಾವಿ: ಹೆಣ್ಣು ಕೂಸೊಂದನ್ನ ರೈಲಿನಿಂದ ಎಸೆದ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಲೋಂಡಾ ಸಮೀಪ ನಡೆದಿದೆ. ಕಟುಕರು ಚಲಿಸ್ತಿದ್ದ ರೈಲಿನಿಂದ ಹೆಣ್ಣು ಮಗುವೊಂದನ್ನ ಎಸೆದಿದ್ದಾರೆ.
ಅದೃಷ್ಟವಶಾತ್ ಮಗು ಬದುಕಿದೆ. ಹಳಿ ಪಕ್ಕದಲ್ಲಿ ನಡೆದುಕೊಂಡು ಹೋಗ್ತಿದ್ದ ಕೆಲ ರೈತರಿಗೆ ಮಗು ಅಳುವಿನ ಶಬ್ಧ ಕೇಳಿಸಿದೆ. ಆಗ ಅವರು ಕಾಡಿನಲ್ಲಿ ಹುಡುಕಾಟ ನಡೆಸಿದ್ದಾರೆ. ದಟ್ಟ ಕಾಡು, ಭಾರಿ ಮಳೆ ಬೀಳುವ ಜಾಗದಲ್ಲಿ ಗಾಯಗೊಂಡಿದ್ದ ಮಗು ಅಳುತಿತ್ತು. ಅದನ್ನು ಪತ್ತೆ ಹಚ್ಚಿದ ರೈತರು ರಕ್ಷಣೆ ಮಾಡಿದ್ದಾರೆ.
ಮಗುವನ್ನ ರಕ್ಷಿಸಿದ ರೈತರು ತಕ್ಷಣ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಫೋನ್ ಮಾಡಿದ್ದಾರೆ. ಅವರು ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ ಕಚೇರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅವರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸ್ರು ಮಗುವನ್ನ ಪಡೆದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಲೋಂಡಾ-ಅಕ್ರಾಲಿ ಕಾಡಿನ ನಡುವೆ ರೈಲು ಚಲಿಸ್ತಿದ್ದ ಟೈಂನಲ್ಲಿ ಮಗುವನ್ನು ಎಸೆಯಲಾಗಿದೆ ಅಂತಾ ಪೊಲೀಸ್ರು ಶಂಕಿಸಿದ್ದಾರೆ. ಈ ಹೀನ ಕೃತ್ಯ ಎಸಗಿದವರ ಪತ್ತೆಗಾಗಿ ಖಾಕಿ ಪಡೆ ಮುಂದಾಗಿದೆ.