ಯಾರದೆ ಹುಟ್ಟು ಹಬ್ಬವಿದ್ರೂ ಕೇಕ್ ಕಟ್ ಮಾಡೋದು ಕಾಮನ್. ಕೆಲವರಿಗೆ ಇದು ಇಷ್ಟ ಆಗಲ್ಲ. ಆದ್ರೆ, ಅವರ ಪ್ರೀತಿ ಪಾತ್ರರು ಬಿಡೋದಿಲ್ಲ. ಹೀಗಾಗಿ ಅವರ ಒತ್ತಾಯಕ್ಕೆ ಮಣಿದು ಕೇಕ್ ಕಟ್ ಮಾಡ್ತಾರೆ. ಯಂಗ್ ಜನರೇಷನ್ ಮಾತ್ರ ಕೇಕ್ ಕಟ್ ಮಾಡೋದು, ಪಾರ್ಟಿ ಮಾಡೋದು ಫಿಕ್ಸ್. ಆದ್ರೆ, ಇಲ್ಲೊಬ್ಬ ರೈತ ತಮ್ಮ ಮುದ್ದಿನ ಎತ್ತಿನ ಹುಟ್ಟು ಹಬ್ಬ ಮಾಡಿಕೊಂಡು ಬರ್ತಿದ್ದಾರೆ.
ಶ್ರೀಮಂತರು ತಮ್ಮ ಸಾಕು ನಾಯಿ, ಬೆಕ್ಕುಗಳ ಬರ್ಥ್ ಡೇ ಆಚರಣೆ ಮಾಡ್ತಾರೆ. ಆದ್ರೆ, ಇಲ್ಲೊಬ್ಬ ರೈತ ಎತ್ತಿನ ಬರ್ಥ್ ಡೇ ಮಾಡ್ತಾರೆ. ರೈತರ ಜೀವನಾಡಿ ಅಂದ್ರೆ ಎತ್ತು, ಆಕಳು, ಎಮ್ಮೆ. ಹೀಗಾಗಿ ಅವುಗಳ ಬಗ್ಗೆ ಸಾಕಷ್ಟು ಪ್ರೀತಿ ತೋರಿಸ್ತಾರೆ. ಅದೇ ರೀತಿ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ರೈತ ಅಶೋಕ ಗಾಮನಗಟ್ಟಿ ಎಂಬುವರು ತಮ್ಮ ಎತ್ತಿನ ಬರ್ಥ್ ಡೇ ಆಚರಿಸುವ ಮೂಲಕ ಅದಕ್ಕೆ ವಿಶೇಷ ಸ್ಥಾನ ನೀಡಿದ್ದಾರೆ.
25 ವರ್ಷಗಳಿಂದ ಎತ್ತಿನ ಹುಟ್ಟು ಹಬ್ಬ
ರೈತ ಅಶೋಕ ಗಾಮನಗಟ್ಟಿ ಕಳೆದ 25 ವರ್ಷಗಳಿಂದ ತಮ್ಮ ಎತ್ತಿನ ಬರ್ಥ್ ಡೇ ಆಚರಿಸ್ತಿದ್ದಾರೆ. ಕುಟುಂಬದ ಸದಸ್ಯರಲ್ಲಿ ಒಬ್ಬ ಅನ್ನೋ ರೀತಿ ನೋಡಿಕೊಳ್ತಿದ್ದಾರೆ. ಇವರ ಮನೆಯಲ್ಲಿ ಹುಟ್ಟಿದ ಕರುವಿನ ಹುಟ್ಟು ಹಬ್ಬ ಆಚರಿಸುವ ಮೂಲಕ ಪ್ರಾಣಿ ಪ್ರೀತಿ ತೋರಿಸಿದ್ದಾರೆ.
ಮನೆಯಲ್ಲಿ ವಿಶೇಷ ಪೂಜೆ
ಜುಲೈ 12, 1994ರಲ್ಲಿ ಅಶೋಕ ಮನೆಯಲ್ಲಿ ಕರು ಜನಿಸುತ್ತೆ. ಆ ಕರುವಿಗೆ ರಾಮ ಎಂದು ನಾಮಕರಣ ಮಾಡ್ತಾರೆ. ಬಳಿಕ ಅದನ್ನ ತಮ್ಮ ಕುಟುಂಬದಲ್ಲೊಬ್ಬ ಎಂಬುವಂತೆ ಪ್ರೀತಿ, ಕಾಳಜಿ ತೋರಿಸಿಕೊಂಡು ಬಂದಿದ್ದಾರೆ. ಅಲ್ದೇ ಪ್ರತಿ ವರ್ಷ ಹುಟ್ಟು ಹಬ್ಬ ಆಚರಿಸ್ತಾರೆ. ಹುಟ್ಟು ಹಬ್ಬದ ದಿನ ಎತ್ತಿನ ಮೈ ತೊಳೆದು, ಗೊಂಡೆ, ಜೂಲಾ(ಮೇಲ್ ಹೊದಿಕೆ) ಹಾಕಿ ಶೃಂಗಾರ ಮಾಡ್ತಾರೆ. ಬಲೂನ್ ಗಳಿಂದ ಮನೆಯನ್ನ ಅಲಂಕಾರ ಮಾಡ್ತಾರೆ. ಮನೆ ಗ್ವಾದಲಿಯಲ್ಲಿ ಎತ್ತನ್ನ ನಿಲ್ಲಿಸಿ ಮುತ್ತೈದೆಯರಿಂದ ಆರತಿ ಬೆಳಗಿಸ್ತಾರೆ. ನಂತರ ಕೇಕ್ ಕಟ್ ಮಾಡಿ ಎಲ್ಲರಿಗೂ ಹಂಚುತ್ತಾರೆ.
ಕಳೆದ 16 ವರ್ಷಗಳಿಂದ ಅಶೋಕ ಗಾಮನಗಟ್ಟಿ ಅವರ ಮನೆಯಲ್ಲಿ ಕೃಷಿ ಕಾಯಕದಲ್ಲಿ ರಾಮ ದುಡಿದಿದ್ದಾನೆ. ಇದೀಗ ಒಂದಿಷ್ಟು ವಯಸ್ಸಾಗಿದೆ. ವಯಸ್ಸಾದ್ಮೇಲೆ ಎತ್ತುಗಳನ್ನ ಮಾರುವವರು ಇದ್ದಾರೆ. ಆದ್ರೆ, ಅಶೋಕ ಖರೀದಿ ಮಾಡಲು ಎಷ್ಟೋ ಮಂದಿ ಬಂದ್ರೂ ಕೊಟ್ಟಿಲ್ಲ. ತಮ್ಮ ಮನೆ ಮಗನಂತೆ ನೋಡಿಕೊಳ್ತಿದ್ದಾರೆ. ಇದು ನಿಜಕ್ಕೂ ಖುಷಿಯ ಸಂಗತಿ.