ಬೆಂಗಳೂರು: ಈ ಐದು ಮಕ್ಕಳ ಕನಸು, ತಾವು ದೊಡ್ಡ ಪೊಲೀಸ್ ಅಧಿಕಾರಿಯಾಗಬೇಕು ಅನ್ನೋದು. ಆದ್ರೆ, ಅವರ ಜೊತೆ ವಿಧಿಯಾಡ್ತಿರುವ ಆಟಕ್ಕೆ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅವರ ಕನಸನ್ನ ಬೆಂಗಳೂರು ಪೊಲೀಸ್ ಆಯುಕ್ತರು ನೆರವೇರಿಸಿದ್ದಾರೆ.
ವಿಜಯಪುರದ 11 ವರ್ಷದ ಮೊಹಮ್ಮದ ಸಾಹೇಬ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆ. ಹಾಸನ ಮೂಲದ 8 ವರ್ಷದ ರತನಕುಮಾರಗೆ ಒಂದು ಕಿಡ್ನಿ ಫೇಲ್ ಆಗಿದ್ದು, ಇನ್ನೊಂದು ಕಿಡ್ನಿ ಶೇಕಡ 30ರಷ್ಟು ಹಾನಿಯಾಗಿದೆ. ಬೆಂಗಳೂರಿನ ನೀಲಸಂದ್ರದ 8 ವರ್ಷದ ಅರ್ಷದ ಪಾಸಾ ಸಿಕಲ್ ಸೆಲ್ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಆಂಧ್ರದ ಅನಂತಪುರದ 8 ವರ್ಷದ ಶ್ರಾವಣಿ ಬಟಲಾ ತಲಸ್ಮೀಯಾ ಕಾಯಿಲೆಗೆ ತುತ್ತಾಗಿದ್ದಾಳೆ. ಬೆಂಗಳೂರಿನ ಸೈಯದ ಇಮಾಮ ಕಿಡ್ನಿ ಹಾಗೂ ಬಿಪಿ ಸೋಂಕಿನಿಂದ ಬಳಲುತ್ತಿದ್ದಾನೆ.
ಈ ಮಕ್ಕಳ ಪೊಲೀಸ್ ಆಗುವ ಕನಸನ್ನ ಆಯುಕ್ತರಾದ ಭಾಸ್ಕರರಾವ ಅವರು ಅಧಿಕಾರ ನೀಡುವ ಮೂಲಕ ಮಕ್ಕಳಲ್ಲಿ ಚೈತನ್ಯ ತುಂಬಿದ್ರು. ಅವರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ವಂದನೆ ಸಲ್ಲಿಸಲಾಯ್ತು. ಗಾಡ್ ಆಫ್ ಹಾನರ್ ನೀಡಲಾಯ್ತು. ಆಯುಕ್ತರ ಕುರ್ಚಿ ನೀಡಲಾಯ್ತು. 100 ವಿಭಾಗಕ್ಕೆ ಕರೆದುಕೊಂಡು ಕಾರ್ಯದ ಬಗ್ಗೆ ತಿಳಿಸಕೊಡಲಾಯ್ತು. ಈ ಮಕ್ಕಳ ಕನಸು ಈಡೇರಿಸುವಲ್ಲಿ ಮೇಕ್ ಎ ಇಂಡಿಯಾ ಫೌಂಡೇಷನ್ ಸಹಕಾರಿಯಾಗಿದೆ.