ಸವದತ್ತಿ: ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಬಡ್ಲಿ ಗ್ರಾಮ ಪಂಚಾಯಿತಿಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲ ಅನಿಸುತ್ತೆ. ಹೀಗಾಗಿ ಯಾರು ಬೇಕಾದವರು ಯಾರ ಸಹಿ ಸಹ ಮಾಡಬಹುದಾಗಿದೆ. ಬಡ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರಕುಮಾರ ಎಸ್.ಪಿ, ಗ್ರಾಮ ಲೆಕ್ಕಾಧಿಕಾರಿಯ ಸಹಿ ತಾನೆ ಮಾಡಿದ್ದಾನೆ.
ಬಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾತ್ರಾಳ ಗ್ರಾಮದ ಮಲ್ಲವ್ವ ಬಮ್ಮನಗೌಡ ಪಾಟೀಲ ಮತ್ತು ಶಂಕ್ರಪ್ಪ ಸುಣಗಾರ ಇವರು ಕಾತ್ರಾಳ ಗ್ರಾಮದ ಮನೆ ಹಾಗೂ ಹೊಲಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ 2 ತಕರಾರು ಅರ್ಜಿಗಳನ್ನ ಸಲ್ಲಿಸಿದ್ದಾರೆ. ಮನೆಗೆ ಸಂಬಂಧಿಸಿದಂತೆ ಪಿಡಿಒಗೆ, ಹೊಲಗಳಿಗೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಾಧಿಕಾರಿಗೆ ಅರ್ಜಿ ಕೊಟ್ಟಿದ್ದಾರೆ.
ಪಿಡಿಒ ರಾಘವೇಂದ್ರ ತಮಗೆ ಸಂಬಂಧಿಸಿದ ಪತ್ರಕ್ಕೆ ಸಹಿ ಹಾಕುವುದಲ್ಲದೇ ಮತ್ತೊಂದು ಪತ್ರಕ್ಕೂ ಸಹಿ ಹಾಕಿದ್ದಾನೆ. ರೈತರು ಬೇಡವೆಂದ್ರೂ ಈ ರೀತಿ ನಡೆದುಕೊಂಡಿದ್ದು ಇದರ ಹಿಂದೆ ಯಾವುದೋ ದುರುದ್ದೇಶವಿದೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಮೇಲಾಧಿಕಾರಿಗಳು ಪಿಡಿಒ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ.