ಸಿಂದಗಿ: ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಸ್ಥಳೀಯ ನಿವಾಸಿ 50 ವರ್ಷದ ಹಳ್ಳೆಪ್ಪ ಬಂಡಾರಿ ಮೃತ ದುರ್ದೈವಿ.
ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯನ್ನ ಮಗ ಸುನೀಲ, ಇಂದು ಬೆಳಗ್ಗೆ ಸುಮಾರು 9.30ಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಆದ್ರೆ, 11 ಗಂಟೆಯಾದ್ರೂ ವೈದ್ಯರು ಬಂದಿಲ್ಲ. ಹೀಗಾಗಿ ಕುಳಿತ ಸ್ಥಳದಲ್ಲಿಯೇ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೆ ಕಾರಣವೆಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪ್ಪಸದ ಸಮಸ್ಯೆಯಿಂದ ತಂದೆಯನ್ನ ಶನಿವಾರ ದವಾಖಾನೆಗೆ ಕರೆದುಕೊಂಡು ಬಂದಿದ್ದೆ. ಅವತ್ತು ನೋಡಿದ ಡಾಕ್ಟರ್ ಸೋಮವಾರ ಇನ್ನೊಮ್ಮೆ ಬರಲು ಹೇಳಿದ್ರು. ಇವತ್ತು 9.30ಕ್ಕ ದಾವಾಖಾನೆಗೆ ಬಂದು ಡಾಕ್ಟರ್ ಗಾಗಿ ಹೊರಗೆ ಕಾಯ್ತಿದ್ದೆ. 11 ಗಂಟೆಯಾದ್ರೂ ಬರ್ಲಿಲ್ಲ. ವಾಪಸ್ ತಂದೆ ಬಳಿ ಹೋಗಿ ನೋಡಿದಾಗ ಕುಸಿದು ಬಿದ್ದಿದ್ದ.
ಸುನೀಲ, ಮೃತ ಹಳ್ಳೆಪ್ಪನ ಮಗ
ಈ ವೇಳೆ ಮೃತನ ಸಂಬಂಧಿಕರು ಕೆಲಕಾಲ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ರೋಗಿಗಳನ್ನ, ಬಾಣಂತಿಯರನ್ನ, ಗರ್ಭೀಣಿಯರನ್ನ ಹೊರ ಹಾಕಿ ಗೇಟ್ ಬಂದ್ ಮಾಡಿದ ಘಟನೆ ಸಹ ನಡೆಯಿತು.
ಈ ಸುದ್ದಿ ತಿಳಿಯುತ್ತಿದ್ದಂತೆ ತಾಲೂಕು ವೈದ್ಯಾಧಿಕಾರಿ ಆರ್.ಎಸ್ ಇಂಗಳೆ ಆಸ್ಪತ್ರೆಗೆ ಭೇಟಿ ನೀಡಿದ್ರು. ಘಟನೆಗೆ ಕಾರಣರಾದ ವೈದ್ಯರ ವಿರುದ್ಧ ಶಿಸ್ತು ಕ್ರಮದ ವರದಿ ಸಲ್ಲಿಸುವುದಾಗಿ ತಿಳಿಸಿದ್ರು. ನಂತರ ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯ್ತು. ಈ ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.