ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬರ ಪರಿಹಾರ ನೀಡಿಕೆಯಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಹೇಳಿ, ಕಾಂಗ್ರೆಸ್ ನಾಯಕರ ವಿಧಾನಸೌಧ ಮುಂಭಾಗದಲ್ಲಿನ ಗಾಂಧಿ ಪ್ರತಿಮೆ ಎದುರು ಇಂದು ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ್ ಸೇರಿದಂತೆ ಸಚಿವರು, ಶಾಸಕರು, ಮುಖಂಡರು ಪ್ರತಿಭಟನೆ ನಡೆಸಿದರು. ಬರ ಪರಿಹಾರ ಕೇಳಿದ್ದ 18,174 ಕೋಟಿ, ಕೊಟ್ಟಿದ್ದು 3,545 ಕೋಟಿ, ಬರ ಪರಿಹಾರ ನೀಡುವಲ್ಲಿಯೂ ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಮೋಸ, ಸುಪ್ರೀಂ ಕೋರ್ಟ್ ಆದೇಶದ ನಂತರವೂ ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಮೋಸ. ಹೀಗೆ ಹತ್ತು ಹಲವು ಪ್ಲೇ ಕಾರ್ಡ್ ಹಿಡಿದುಕೊಂಡು ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ 48 ಲಕ್ಷ ಹೆಕ್ಟೇರ ಬೆಳೆ ಹಾನಿಯಾಗಿದೆ. 35,162 ಕೋಟಿ ನಷ್ಟವಾಗಿದೆ. ಇದರ ಅರ್ಧದಷ್ಟು ಪರಿಹಾರ ಕೇಳಿದ್ದೇವೆ. ಉಳಿದ ಹಣವನ್ನು ರಾಜ್ಯದಲ್ಲಿನ ಸಂಪನ್ಮೂಲದಿಂದ ಭರಿಸುತ್ತಿದ್ದೇವೆ. ಆದರೆ, 3,454 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಪೂರ್ತಿ ಪರಿಹಾರಕ್ಕಾಗಿ ನಮ್ಮ ಹೋರಾಟ ಮುಂದುವರೆಯುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.