ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕದಲ್ಲಿಂದು ಪ್ರಚಾರ ನಡೆಸುತ್ತಿರುವ ಪ್ರಧಾನಿ ಮೋದಿ, ಭಾನುವಾರ ಮುಂಜಾನೆ ಕುಂದಾನಗರದಲ್ಲಿ ಮತಯಾಚನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮನೆ ಮನೆಗೂ ದಾಳಿ ನಡೆಸುತ್ತೆ. ನೀವು ಕೂಡಿಟ್ಟ ಹಣ ಮಾತ್ರವಲ್ಲದೆ ಮಾಂಗಲ್ಯಸೂತ್ರ ತೆಗೆದುಕೊಳ್ಳುತ್ತೆ ಎನ್ನುವ ಮೂಲಕ ಮತ್ತೊಮ್ಮೆ ಮಾಂಗಲ್ಯಸೂತ್ರ ಹೇಳಿಕೆ ನೀಡಿದ್ದಾರೆ.
ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅಭಿವೃದ್ಧಿ ವಿಚಾರಗಳ ಕುರಿತು, ತಮ್ಮ ವರ್ಷಗಳ ಸಾಧನೆ ಕುರಿತು, ಮುಂದಿನ ಗುರಿಯ ಬಗ್ಗೆ ಮಾತನಾಡುವ ಬದಲು 30 ನಿಮಿಷದ ಭಾಷಣದಲ್ಲಿ ವಿಪಕ್ಷಗಳ ವಿರುದ್ಧ ಬರೀ ಟೀಕಾಸ್ತ್ರ ಪ್ರಯೋಗಿಸಿದರು.
ರಾಜ, ಮಹಾರಾಜರು ಜನರ ಆಸ್ತಿಯನ್ನು ಕಬಳಿಸುತ್ತಾರೆ. ರಾಜಪರಂಪರೆಯನ್ನು ಅವಮಾನಿಸುತ್ತಾರೆ. ಔರಂಗಜೇಬ್ ನಂತವರು ದೇಶ ಲೂಟಿದ ಮಾಡಿದ ಬಗ್ಗೆ ಮಾತನಾಡುವುದಿಲ್ಲ. ಸ್ವಾತಂತ್ರ್ಯ ಪೂರ್ವ ದಿನದಿಂದಲೂ ತುಷ್ಟೀಕರಣ ಮಾಡಿಕೊಂಡು ಬರುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇರುವ ಕಡೆಯಲ್ಲ ಭ್ರಷ್ಟಾಚಾರ, ಶೋಷಣೆ, ಅತ್ಯಾಚಾರ ಘಟನೆಗಳು ನಡೆಯುತ್ತಿವೆ. ಹುಬ್ಬಳ್ಳಿಯಲ್ಲಿ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿನಿ ಹತ್ಯೆಯಾಗುತ್ತೆ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ಬಿಜೆಪಿ ಅಭ್ಯರ್ಥಿಗಳಾದ ಜಗದೀಶ್ ಶೆಟ್ಟರ್, ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಿಎಂ ಯಡಿಯೂರಪ್ಪ ಸೇರಿ ಇತರರಿದ್ದರು.