ಪ್ರಜಾಸ್ತ್ರ ಸುದ್ದಿ
ಸಿಂದಗಿ: ನಮ್ಮ ಪಕ್ಷ ಬಡವರು, ದೀನ ದಲಿತರು ಸೇರಿದಂತೆ ಎಲ್ಲ ವರ್ಗದ ಪರವಾಗಿ ಇದೆ. ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದೇವೆ. ಬಿಜೆಪಿ ಒಬ್ಬ ವ್ಯಕ್ತಿ ಹಾಗೂ ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡುತ್ತಿದೆ ಎಂದು ಸಿಂದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದ ಎಲ್ಲರಿಗೂ ಅನುಕೂಲವಾಗುತ್ತಿದೆ. ಇದರ ಫಲಾನುಭವಿಗಳನ್ನು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಅಭಿವೃದ್ಧಿ ಗೊತ್ತಿಲ್ಲದ ಬಿಜೆಪಿ ಜಾತಿ, ಧರ್ಮ, ಒಬ್ಬ ವ್ಯಕ್ತಿಯ ಹೆಸರಲ್ಲಿ ಮತ ಕೇಳುತ್ತಿದೆ ಎಂದರು. ಇನ್ನು ಏಪ್ರಿಲ್ 24, ಬುಧವಾರ ಮುಂಜಾನೆ 11 ಗಂಟೆಗೆ ಪಟ್ಟಣದ ಮಾಂಗಲ್ಯ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಲಿದೆ. ಸಚಿವರಾದ ಎಂ.ಬಿ ಪಾಟೀಲ, ಶಿವಾನಂದ ಪಾಟೀಲ ಸೇರಿ ಶಾಸಕರು ಭಾಗವಹಿಸಲಿದ್ದಾರೆ ಎಂದರು.
ಕಾಂಗ್ರೆಸ್ ಉಸ್ತುವಾರಿ ರಾಜಶೇಖರ ಕೂಚಬಾಳ ಮಾತನಾಡಿ, ನಮ್ಮ ಗೆಲುವು ಖಚಿತ. 30 ವರ್ಷಗಳ ಕಾಲ ಸಂಸದೀಯ ಸ್ಥಾನದಲ್ಲಿದ್ದರೂ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ. ಸಂಸತ್ತಿನಲ್ಲಿ ಒಂದೇ ಒಂದು ಪ್ರಶ್ನೆ ಕೇಳದವರು ದೇಶದಲ್ಲಿಯೇ ಯಾರೂ ಇಲ್ಲವೆಂದು ಪರೋಕ್ಷವಾಗಿ ರಮೇಶ ಜಿಗಜಿಣಗಿ ವಿರುದ್ಧ ಕಿಡಿ ಕಾರಿದರು. ಸರಳ, ಸಜ್ಜನಿಕೆಯ ರಾಜು ಆಲಗೂರ ಅವರಿಗೆ ಮತ ನೀಡಬೇಕು ಎಂದರು.
ಈ ವೇಳೆ ಪಕ್ಷದ ಮುಖಂಡರಾದ ಯಂಕನಗೌಡ ಪಾಟೀಲ, ಹಾಸೀಂ ಆಳಂದ, ರಮೇಶಗೌಡ ಬಿರಾದಾರ, ನಿಂಗಣ್ಣ ಬುಳ್ಳಾ, ನೂರಅಹ್ಮದ ಅತ್ತರ ಉಪಸ್ಥಿತರಿದ್ದರು.