ಬೆಳಗಾವಿ: ಪ್ರೀತಿಯ ಬಲೆ ಬೀಸಿ, ಬಳಿಕ ಹಣಕ್ಕೆ ಬೇಡಿ ಇಡುತ್ತಿದ್ದ ತಂಡವೊಂದು ಸವದತ್ತಿ ಠಾಣೆ ಪೊಲೀಸರ ಅತಿಥಿಯಾಗಿದೆ. ಉಗರಗೋಳ ಗ್ರಾಮದ ಗೀತಾ ಹೈಬತ್ತಿ, ಯಲ್ಲಮ್ಮನಗುಡ್ಡದ ಗೌರಿ ಲಮಾಣಿ, ಗೋಕಾಕ ತಾಲೂಕಿನ ಶ್ರೀದೇವಿ ಗೊಡಚಿ, ಬೆಳಗಾವಿಯ ಆನಂದ ಹುಂಡೇಕರ ಹಾಗೂ ಯಲಮ್ಮನಗುಡ್ಡದ ಅನಿಲ ಲಮಾಣಿ ಬಂಧಿತ ಐವರು ಆರೋಪಿಗಳಾಗಿದ್ದಾರೆ.
ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಅನ್ನೋ ಸಂಘಟನೆಯ ಹೆಸರು ಹೇಳಿಕೊಂಡು ಪರಿಚಯ ಮಾಡಿಕೊಳ್ತಿದ್ದ ಮೋಸಗಾತಿಯರು, ಬಳಿಕ ಅವರನ್ನ ತಮ್ಮ ಮೋಹದ ಬಲೆಯಲ್ಲಿ ಬೀಳಿಸಿಕೊಳ್ಳುತ್ತಿದ್ರು. ಪ್ರೀತಿ, ಪ್ರೇಮದ ನಾಟಕವಾಡಿದ ಬಳಿಕ, ಅವರ ಬಳಿ ಹಣದ ಬೇಡಿಕೆ ಇಡುತ್ತಿದ್ದರು. ಹಣ ಕೊಟ್ಟರೆ ಅವರು ಬಚಾವ್. ಇಲ್ಲದೆ ಹೋದ್ರೆ ಬ್ಲ್ಯಾಕ್ ಮೇಲ್ ಮಾಡ್ತಿದ್ರು. ಅವರಿಗೆ ಹಿಂಸೆ ಕೊಡ್ತಿದ್ರು.
ಗೋಕಾಕ ತಾಲೂಕಿನ ದಂಡಾಪುರ ಗ್ರಾಮದ ಈರಪ್ಪ ಎಂಬುವವರನ್ನ ಪರಿಚಯಿಸಿಕೊಂಡ ಶ್ರೀದೇವಿ ಗೊಡಚಿ, ಬಳಿಕ ಪ್ರೀತಿಸುವುದಾಗಿ ಹೇಳಿದ್ದಾಳೆ. ಕೆಲ ದಿನಗಳ ನಂತ್ರ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಈರಪ್ಪನನ್ನು ಕರೆಸಿಕೊಂಡಿದ್ದಾಳೆ. ಆಕೆಗೆ ಗೀತಾ ಮತ್ತು ಗೌರಿ ಜೊತೆಯಾಗಿದ್ದಾರೆ. ಈ ಮೂವರು ಸೇರಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೊಡದೆ ಹೋದ್ರೆ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ದೇ, ಈರಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ. ಇದು ಊರ ಹಿರಿಯರ ತನಕ ಹೋಗಿ ಅಲ್ಲಿಯೂ ಇದು ವ್ಯವಹಾರ ಬಗೆಹರಿದಿಲ್ಲ. ಹೀಗಾಗಿ ಮತ್ತೊಮ್ಮೆ ಆರೋಪಿಗಳು ಈರಪ್ಪನನ್ನ ಥಳಿಸಿದ್ದಾರೆ. ಇದ್ರಿಂದ ರೋಸಿ ಹೋದ ಆತ ಪೊಲೀಸರ ಬಳಿ ಹೋಗಿದ್ದಾನೆ. ಪೊಲೀಸರ ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.