ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಯಡಿಯೂರಪ್ಪ ನಂತರ ಸಿಎಂ ಆಗುವ ರೇಸಿನಲ್ಲಿ ಸಾಕಷ್ಟು ಜನರು ಇದ್ದರು. ಹಿರಿಯರು, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡವರು, ಹೊಸ ಮುಖ, ಜಾತಿ ಲೆಕ್ಕಾಚಾರ, ಆರ್ ಎಸ್ಎಸ್ ಹಿನ್ನೆಲೆ ಹೀಗೆ ಸಾಕಷ್ಟು ವಿಷಯಗಳಲ್ಲಿ ಕೂಡಿ ಕಳೆದು ತಮ್ಗೆ ಸಿಎಂ ಸ್ಥಾನ ಸಿಗಲಿದೆ ಎಂದು ಕಾದು ಕುಳಿತಿದ್ದವರ ನಡುವೆ ಬಸವರಾಜ ಬೊಮ್ಮಾಯಿ ಎದ್ದು ಬಂದಿದ್ದಾರೆ.
ರಾಜ್ಯದ 30ನೇ ಮುಖ್ಯಮಂತ್ರಿಯಾಗಿರುವ ಬೊಮ್ಮಾಯಿ ಅವರ ಎದುರು ಸಾಕಷ್ಟು ಸವಾಲುಗಳಿವೆ. ಇದರ ಜೊತೆಗೆ ಹಿರಿಯ ನಾಯಕರ ಪಾಲಿಟ್ರಿಕ್ಸ್ ಶುರುವಾಗ್ತಿದೆ. ಸಚಿವ ಆಕಾಂಕ್ಷಿಗಳ ಜೊತೆಗೆ ಡಿಸಿಎಂ ಹುದ್ದೆಯ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಇನ್ನು ಕೆಲವರು ಬೊಮ್ಮಾಯಿ ಸಚಿವ ಸಂಪುಟದಲ್ಲಿ ನಾವು ಇರುವುದಿಲ್ಲ ಎನ್ನುತ್ತಿದ್ದಾರೆ. ಅಂತವರ ಸಾಲಿನಲ್ಲಿ ಇದೀಗ ಕೇಳಿ ಬರ್ತಿರುವ ಹೆಸರು ಜಗದೀಶ ಶೆಟ್ಟರ್ ಅವರದ್ದು.
ಹಿರಿಯ ನಾಯಕ ಯಡಿಯೂರಪ್ಪ ಸಂಪುಟದಲ್ಲಿದ್ದೆ. ಸಿಎಂ ಆಗಿಯೂ ಸೇವೆ ಸಲ್ಲಿಸಿದ್ದೇನೆ. ಬೊಮ್ಮಾಯಿ ಸಂಪುಟದಲ್ಲಿ ಇರುವುದಿಲ್ಲವೆಂದು ಹೇಳಿರುವ ವಿಚಾರ ಜೋರಾಗಿ ಚರ್ಚೆಯಾಗ್ತಿದೆ. ಇದು ಆರಂಭದಲ್ಲಿಯೇ ಬಂಡಾಯದ ಸಾಧ್ಯತೆ ಇದ್ಯಾ ಅನ್ನೋ ಪ್ರಶ್ನೆ ಮೂಡಿದೆ. ಜಗದೀಶ ಶೆಟ್ಟರ್, ಬಿ.ಶ್ರೀರಾಮುಲು ಸೇರಿದಂತೆ ಹಲವರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರಾಗಿದ್ರು. ಹಿರಿಯ ನಾಯಕ ಈಶ್ವರಪ್ಪಗೆ ಡಿಸಿಎಂ ಕೊಡ್ಲೇಬೇಕು ಎಂದು ಅವರ ಸಮುದಾಯದ ಸ್ವಾಮೀಜಿಗಳು ಎಚ್ಚರಿಕೆ ನೀಡಿದ್ದಾರೆ.
ತಮ್ಮ ಸಿನಿಯಾರಿಟಿ ಕಡೆಗಣಿಸಿ ಬೊಮ್ಮಾಯಿಗೆ ಪಟ್ಟ ಎಂದು ಪರೋಕ್ಷವಾಗಿ ಶೆಟ್ಟರ್ ಅಸಮಾಧಾನ ಹೊರ ಹಾಕಿದ್ದು, ಇದರ ಹಿಂದೆ ಆರ್ ಎಸ್ಎಸ್ ಇದ್ಯಾ? ಯಡಿಯೂರಪ್ಪ ಅಸ್ತ್ರಕ್ಕೆ ಬಿಜೆಪಿ ಹೈಕಮಾಂಡ್ ಪ್ರತ್ಯಸ್ತ್ರ ರೆಡಿ ಮಾಡಿಕೊಡುತ್ತಿದೆಯಾ? ಬೊಮ್ಮಾಯಿ ಕುರ್ಚಿ ಎಷ್ಟು ಸೇಫ್, ಎಷ್ಟು ದಿನ ಬೊಮ್ಮಾಯಿ ರಾಜ್ಯಭಾರ ಅನ್ನೋದು ಈಗ್ಲೇ ಶುರುವಾಗಿದೆ.