ಪ್ರಜಾಸ್ತ್ರ ಸುದ್ದಿ
ದಾವಣಗೆರೆ: ಇತ್ತೀಚೆಗೆ ಇಲ್ಲಿನ ಬಂಟರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಾಜಿ ಸಚಿವ, ಶಾಸಕ ಶಾಮನೂರ ಶಿವಶಂಕರಪ್ಪ, ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ವಿರುದ್ಧ ಮಾತನಾಡುವ ಭರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದು ಪ್ರಧಾನಿ ಮೋದಿಗೆ ಕಮಲದ ಹೂವು ಅರ್ಪಿಸುತ್ತೇನೆ ಎನ್ನುತ್ತಾರೆ. ಈ ಹಿಂದೆ ಗೆದ್ದಿದ್ದು ನೀವೇ (ಗಾಯತ್ರಿ ಪತಿ ಜಿ.ಎಂ ಸಿದ್ದೇಶ್ವರ್) ಅಲ್ಲವೇ? ಆಗ ಹೂವು ಕಳಿಸಿದ್ರಾ ಎಂದಿದ್ದರು.
ಮುಂದುವರೆದು ಮಾತನಾಡಿದ ಅವರು, ಹೂವನ್ನು ಕಳಿಸಿದರೆ ಅಭಿವೃದ್ಧಿ ಆಗುವುದಿಲ್ಲ. ಕೇವಲ ಮೋದಿ ಮೋದಿ ಎನ್ನುವುದಿಲ್ಲ. ಎದುರಾಳಿ ಅಭ್ಯರ್ಥಿಗೆ ಜನರ ಮಧ್ಯ ಮಾತನಾಡಲು ಬರುವುದಿಲ್ಲ. ಅವರು ಕೇವಲ ಅಡುಗೆ ಮಾಡಲು ಲಾಯಕ್ಕು ಎಂದಿದ್ದಾರೆ.
ಶಾಮನೂರ ಹೇಳಿಕೆಗೆ ಗಾಯತ್ರಿ ಸಿದ್ದೇಶ್ವರ್ ತಿರುಗೇಟು ನೀಡಿದ್ದು, ಅವರು ತಮ್ಮ ಮಾತುಗಳಿಂದ ಮಹಿಳೆಯರನ್ನು ಅವಮಾನಿಸಿದ್ದಾರೆ. ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಅಡುಗೆ ಮನೆಗೆ ಮಾತ್ರ ಸೀಮಿತವಾಗಿಲ್ಲ. ಅವರು ಸಮರ್ಥವಾಗಿ ಅಧಿಕಾರ ನಡೆಸುತ್ತಾರೆಂದು ಅಜ್ಜನಿಗೆ ತಿಳಿದಿಲ್ಲ ಎಂದಿದ್ದಾರೆ.
ಬ್ಯಾಡ್ಮಿಂಟನ್ ಆಟಗಾರ್ತಿ, ಬಿಜೆಪಿಯ ಸೈನಾ ನೆಹ್ವಾಲ್ ಟ್ವೀಟ್ ಮೂಲಕ ಕಿಡಿ ಕಾರಿದ್ದು, ಮಹಿಳೆಯನ್ನು ಅಡುಗೆ ಕೋಣೆಗೆ ಸೀಮಿತಿಗೊಳಿಸಬೇಕು ಎಂದು ಕಾಂಗ್ರೆಸ್ ಕರ್ನಾಟಕದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಬಯಸಿದ್ದಾರೆ. ಆದರೆ, ಪ್ರತಿ ಮಹಿಳೆಯೂ ಹೋರಾಡಬಲ್ಲಳು. ಇದರಲ್ಲಿ ನಂಬಿಕೆ ಇಟ್ಟಿರುವ ಪಕ್ಷದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಸ್ಪರ್ಧಿಸಿದ್ದಾರೆ ಎಂದಿದ್ದಾರೆ.
ಬಿಜೆಪಿ ನಾಯಕಿ ಶೈನಾ ಚುಡಸಾಮ ಸಹ ವಾಗ್ದಾಳಿ ನಡೆಸಿ, ಲಡ್ಕಿ ಹೂಂ ಲಡ್ಕಿ ಸಕ್ತಿ ಹೂಂ ಅಭಿಯಾನ ನಡೆಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಸೋನಿಯಾ ಗಾಂಧಿ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.