ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ನ ಕೆಲ ಶಾಸಕರು ಪತ್ರ ಬರೆದಿರುವುದು ಇದೀಗ ಹೊಸ ಅಲೆ ಎಬ್ಬಿಸಿದೆ. ಸಚಿವರು ಹಾಗೂ ಸ್ವಪಕ್ಷೀಯ ಶಾಸಕರ ನಡುವೆ ಸಮನಯ್ವ ಕೊರತೆಯಿದ್ದು, ಇದು ಪತ್ರದ ಮೂಲಕ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ.
ಶಾಸಕ ಬಿ.ಆರ್ ಪಾಟೀಲ ಅವರು ಬರೆದಿರುವ ಪತ್ರಕ್ಕೆ ಹಲವು ಶಾಸಕರು ಸಹಿ ಹಾಕಿದ್ದಾರೆ. ಜುಲೈ 27ರಂದು ಸಿಎಲ್ ಪಿ ಸಭೆ ಕರೆಯಲಾಗಿದೆ. ವರ್ಗಾವಣೆ ವಿಚಾರವಾಗಿ ಶಾಸಕರು ಹಾಗೂ ಸಚಿವರ ನಡುವೆ ಅಸಮಾಧಾನ ಮೂಡಿದೆ. ಇದೆ ವಿಚಾರಕ್ಕೆ ಸಿಎಂಗೆ ಪತ್ರ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಪತ್ರಕ್ಕೆ ಸಹಿ ಮಾಡಿದ ಶಾಸಕರಲ್ಲಿ ಒಬ್ಬರಾಗಿರುವ ಯಲಬುರ್ಗಾ ಶಾಸಕ ಬಸವರಾಜ್ ರಾಯರೆಡ್ಡಿ, ಶಾಸಕಾಂಗದ ಸಭೆ ಕರೆಯಲು ಪಾಟೀಲರು ಪತ್ರ ಬರೆದಿದ್ದಾರೆ. ಅದಕ್ಕೆ ಸಹಿ ಮಾಡಿದ್ದೇನೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ನನಗಂತೂ ಯಾವುದೇ ಅಸಮಾಧಾನವಿಲ್ಲ. ಕೆಲವರಿಗೆ ವರ್ಗಾವಣೆ ವಿಚಾರಕ್ಕೆ ಇರಬಹುದು. ಇದರಿಂದ ಸರ್ಕಾರ, ಸಿಎಂಗೆ ಯಾವುದೇ ತೊಂದರೆಯಿಲ್ಲ ಅಂತಾ ಹೇಳಿದರು.
ಈ ಪತ್ರ ವಿಚಾರ ವಿಪಕ್ಷಗಳ ಕೈಗೆ ಮತ್ತೊಂದು ಅಸ್ತ್ರ ಕೊಟ್ಟಂತಾಗಿದೆ. ಒಂದ್ಕಡೆ ಸರ್ಕಾರ ಬೀಳಿಸಲು ತಂತ್ರಗಾರಿಕೆ ನಡೆದಿದೆ ಎನ್ನುವುದರ ಮಧ್ಯದಲ್ಲಿಯೇ ಈ ವಿಚಾರ ಬಹಿರಂಗಗೊಂಡಿದ್ದು, ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.