ಪ್ರಜಾಸ್ತ್ರ ಸುದ್ದಿ
ನವದೆಹಲಿ: ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾದ ಬಗ್ಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಹೊರಗೆ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಮಣಿಪುರ ಬಗ್ಗೆ ನಿಯಮ 267ರ ಅಡಿಯಲ್ಲಿ ಚರ್ಚಿಸಲು ನಾವು ಮನವಿ ಮಾಡಿದ್ದೇವೆ. ಪ್ರಧಾನಿಯವರು ಸಂಸತ್ತಿನಲ್ಲಿ ಮಾತನಾಡಬೇಕು. ಅದನ್ನು ಬಿಟ್ಟು ತಮ್ಮಲ್ಲಿರುವ ಭಯದಿಂದ ಈಸ್ಟ್ ಇಂಡಿಯಾ ಕಂಪನಿ, ಇಂಡಿಯನ್ ಮುಜಾಹಿದ್ದೀನ್ ಎಂದು ನೆನಪು ಮಾಡಿಕೊಂಡಿದ್ದಾರೆ ಅಂತಾ ಕಿಡಿ ಕಾರಿದ್ದಾರೆ.
ಇನ್ನು ಈ ಕುರಿತು ರಾಹುಲ್ ಗಾಂಧಿ ಟ್ವೀಟ್ ಮಾಡಿ, ಮಣಿಪುರದ ಜನರಿಗೆ ಶಾಂತಿ, ಪ್ರೀತಿಯನ್ನು ವಾಪಸ್ ನೀಡುತ್ತೇವೆ. ಮಣಿಪುರಕ್ಕೆ ಆಗಿರುವ ಗಾಯವನ್ನು ವಾಸಿ ಮಾಡುತ್ತೇವೆ. ನೀವು ಬಯಸಿದಂತೆ ನಮ್ಮನ್ನು ಕರೆಯಿರಿ. ನಮ್ಮ ಪರಿಕಲ್ಪನೆಯ ಮಣಿಪುರವನ್ನು ಮರುನಿರ್ಮಾಣ ಮಾಡುತ್ತೇವೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.