ಪ್ರಜಾಸ್ತ್ರ ಸುದ್ದಿ
ರಾಣೆಬೆನ್ನೂರು: ಇತ್ತೀಚೆಗೆ ಬಳ್ಳಾರಿಯಲ್ಲಿ ಕೋವಿಡ್ 19ನಿಂದ ಮೃತಮಟ್ಟವರನ್ನ ಬೃಹತ್ ಗುಂಡಿಯಲ್ಲಿ ಎಸೆದು ಹೋಗಿರುವ ಘಟನೆ ಕಣ್ಮುಂದೆ ಇದೆ. ಈ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಯ್ತು. ಜಿಲ್ಲಾಡಳಿತ ಅಂತವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಯ್ತು. ಆದ್ರೆ, ಈಗ ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ಮತ್ತೊಂದು ರೀತಿ ಪ್ರಕರಣ ನಡೆದಿದೆ.
ಅನಾರೋಗ್ಯದ ಮೃತಪಟ್ಟ ಕರೋನಾ ಶಂಕಿತ ವ್ಯಕ್ತಿಯ ಮೃತದೇಹವನ್ನ, ಬಸ್ ನಿಲ್ದಾಣದಲ್ಲಿಟ್ಟು ಹೋಗಿರುವ ಘಟನೆ ನಡೆದಿದೆ. ಪಿಪಿಇ ಕಿಟ್ ನಿಂದ ಪ್ಯಾಕ್ ಮಾಡಿದ ಮೃತದೇಹ ನೋಡಿದ ಸಾರ್ವಜನಿಕರು ಬಸ್ ನಿಲ್ದಾಣದ ಸುತ್ತಮುತ್ತ ಓಡಾಡಲು ಭಯ ಪಟ್ಟರು. ಈ ಬಗ್ಗೆ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡು ಆರೋಗ್ಯ ಇಲಾಖೆ, ಶವವನ್ನ ಕೋವಿಡ್ 19 ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ಮಾಡಲಾಗಿದೆ.
ಮೂರು ದಿನಗಳ ಹಿಂದೆ ಕೆಮ್ಮಿನಿಂದ ಬಳಲುತ್ತಿದ್ದ 45 ವರ್ಷದ ವ್ಯಕ್ತಿ ತಾಲೂಕು ಆಸ್ಪತ್ರೆಗೆ ಬಂದಿದ್ದ. ಕರೋನಾ ಲಕ್ಷಣಗಳು ಕಾಣಿಸಿಕೊಂಡಿದ್ರಿಂದ ಗಂಟಲು ದ್ರವವನ್ನ ಟೆಸ್ಟ್ ಗೆ ಕಳುಹಿಸಿ ಕೊಡಲಾಗಿತ್ತು. ಬಳಿಕ ಹೋಂ ಕ್ವಾರಂಟೈನ್ ಗೆ ಸೂಚಿಸಲಾಗಿತ್ತು. ಆದ್ರೆ, ಇಂದು ಬೆಳಗ್ಗೆ ಮಾರುತಿನಗರ ಪಕ್ಕದ ರಸ್ತೆಯಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದ. ಬಳಿಕ ಆಂಬ್ಯುಲೆನ್ಸ್ ನಲ್ಲಿ ತೆಗೆದುಕೊಂಡು ಹೋಗಲಾಗಿತ್ತು. ಆದ್ರೆ, ಆತ ಮೃತಪಟ್ಟಿದ್ದು ತಿಳಿದು, ಪಿಪಿಇ ಕಿಟ್ ನಲ್ಲಿ ಪ್ಯಾಕ್ ಮಾಡಿದ್ದಾರೆ. ಕುಟುಂಬಸ್ಥರು ಬರುವುದು ಲೇಟಾಗಿರುವುದಕ್ಕೆ ಮೃತದೇಹವನ್ನ ಆಸ್ಪತ್ರೆ ಎದುರುಗಿನ ಬಸ್ ನಿಲ್ದಾಣದಲ್ಲಿಟ್ಟು ಹೋಗಿದ್ದಾರೆ.
ಆಸ್ಪತ್ರೆ ಸಿಬ್ಬಂದಿಯ ಈ ಅಮಾನವೀಯ ಕಾರ್ಯಕ್ಕೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಜೀವ ನೀಡುವ ವೈದ್ಯಕೀಯ ಸಿಬ್ಬಂದಿ, ಜೀವ ಹೋದ್ಮೇಲೆ ಹೀಗೆಕೆ ಮಾಡ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.