ವಿಜಯಪುರ: ಜಿಲ್ಲೆಗೆ ವಿದೇಶದಿಂದ 266 ಜನ ಬಂದಿದ್ದಾರೆ. ಇವರಲ್ಲಿ 11 ಜನ 28 ದಿನ ಎರಡು ನಿಗಾ ಅವಧಿ ಮುಗಿಸಿದ್ದಾರೆ. 90 ಜನ 15 ರಿಂದ 22 ದಿನಗಳ ನಿಗಾ ಅವಧಿಯಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಹೇಳಿದ್ದಾರೆ.
ಇನ್ನು 165 ಜನ ಮನೆ ನಿಗಾದಲ್ಲಿದ್ದಾರೆ. 5 ಜನರ ಗಂಟಲು ದ್ರವ ಮಾದರಿ ನೆಗೆಟಿವ್ ಬಂದಿದೆ. ಮನೆ ನಿಗಾದಲ್ಲಿರುವವರ ಮೇಲೆ ಕಣ್ಣಿಡಲು ನೆರೆಹೊರೆ ಕಣ್ಗಾವಲು ಯೋಜನೆ ಜಾರಿಗೆ ತಂದಿದ್ದೇವೆ. ಮನೆ ನಿಗಾದಲ್ಲಿರುವ 165 ಜನರ ಮೇಲೆ ಅಕ್ಕಪಕ್ಕದ ಮನೆಯವರು ನಿಗಾ ಇಡಲಿದ್ದಾರೆ. ಆದ್ರೆ, ಕೆಲವರು ಮನೆ ನಿಗಾ ಇದ್ದರೂ ಬೇರೆ ಕಡೆ ಹೋಗಿ ಬಂದಿರುವ ಮಾಹಿತಿ ಇದೆ. ಮನೆ ದೂರದಲ್ಲಿ ಸಿಬ್ಬಂದಿ ನಿಯೋಜನೆ ಮಧ್ಯೆಯೂ ಕೆಲವರು ಕಣ್ತಪ್ಪಿಸಿ ತಿರುಗಾಡಿದ್ದಾರೆ. ಈ ಹಿನ್ನೆಲೆ ನೆರೆಹೊರೆ ಕಣ್ಗಾವಲು ಜಾರಿ ಮಾಡಿದ್ದೇವೆ ಎಂದಿದ್ದಾರೆ.
ಇದರ ಜೊತೆಗೆ ವಿಜಯಪುರ ಜಿಲ್ಲೆಯಿಂದ ಕಲಬುರಗಿಗೆ ಬಸ್ಸುಗಳ ಸಂಚಾರ ಸ್ಥಗಿತಗೊಳಿಸಲಾಗುವುದು. ಮಹಾರಾಷ್ಟ್ರಕ್ಕೆ ಈಗಾಗಲೇ ಬಸ್ ಸಂಚಾರ್ ಬಂದ್ ಆಗಿದೆ. ಪ್ರಧಾನಿ ಜನತಾ ಕರ್ಫ್ಯೂ ಯಶಸ್ವಿಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಹೇಳಿದ್ದಾರೆ.