ದೇವರಹಿಪ್ಪರಗಿ: ಕರೋನಾದಿಂದಾಗಿ ಎಲ್ಲರ ಪರಿಸ್ಥಿತಿ ಸಾಕಷ್ಟು ಹೈರಾಣಾಗಿದೆ. ಸಿಟಿಯಲ್ಲಿರುವವರ ಪರಿಸ್ಥಿತಿಯೊಂದು ರೀತಿಯಾದ್ರೆ, ಹಳ್ಳಿಯಲ್ಲಿರುವವರ ಜನರ ಪರಿಸ್ಥಿತಿ ಮತ್ತೊಂದು ಇದೆ. ಹೀಗಾಗಿ ಕೆಲವರು ಒಂದಿಷ್ಟು ಕೈಲಾದ ಸಹಾಯ ಮಾಡುವ ಮೂಲಕ ಮಾನವೀಯತೆ ತೋರುತ್ತಿದ್ದಾರೆ.
ಹೌದು, ದೇವರಹಿಪ್ಪರಗಿ ತಾಲೂಕಿನ ‘ಆರೂರು ಗೆಳೆಯರ ಬಳಗ’ ಸೇರಿಕೊಂಡು ತಮ್ಮ ತಾಲೂಕು ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಒಂದಿಷ್ಟು ಪರೋಪಕಾರಿ ಕೆಲಸಗಳನ್ನ ಮಾಡ್ತಿದ್ದಾರೆ. ಕೊಂಡಗೂಳಿ, ಬಿ.ಬಿ ಇಂಗಳಗಿ, ಹಂಚಲಿ, ಅಂಬಳೂರು, ಕೆಸರಟ್ಟಿ, ನಾಗರಳದೋಣ ಗ್ರಾಮದ ಯುವಕರು ಸೇರಿಕೊಂಡು ಕಟ್ಟಿಕೊಂಡಿರುವ ‘ಆರೂರು ಗೆಳೆಯರ ಬಳಗ’ ಇದಕ್ಕೂ ಮೊದ್ಲು ರಸ್ತೆ ರಿಪೇರಿಗಾಗಿ ಹೋರಾಟ ಮಾಡಿತ್ತು. ಇತ್ತೀಚೆಗೆ ತಾಲೂಕು ಪಂಚಾಯ್ತಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಹೋರಾಟ ನಡೆಸಿದ್ದಾರೆ. ಇದೀಗ ಕರೋನಾದಿಂದ ಇಕ್ಕಟಿಗೆ ಸಿಲುಕಿದವರಿಗೆ ಸಹಾಯ ಮಾಡ್ತಿದ್ದಾರೆ. ಈ ಮೂಲಕ ಆರೂರು ಗೆಳೆಯರ ಬಳಗ ಎಲ್ಲ ಕೆಲಸಕ್ಕೂ ಮುಂದೆ ಅನ್ನೋದು ತೋರಿಸಿದೆ.
ಈ ಬಳಗದ ಸಂಸ್ಥಾಪಕರಾದ ಬಸು ಪಾಟೀಲ ಹಾಗೂ ಚಂದ್ರಕಾಂತ ಸೊನ್ನದ ಅವರೊಂದಿಗೆ ಶಂಕರಲಿಂಗ ಸೊನ್ನದ ಅವರು ಸೇರಿಕೊಂಡು ಸುಮಾರು 30 ಸಾವಿರ ರೂಪಾಯಿ ವೆಚ್ಚದಲ್ಲಿ 45 ಬಾಣಂತಿಯರಿಗೆ ಪೋಷ್ಠಿಕಾಂಶವುಳ್ಳ ಬದಾಮಿ, ಉತ್ತತ್ತಿ, ಕೊಬ್ಬರಿ, ತುಪ್ಪ, ಒಣದ್ರಾಕ್ಷಿ, ತೊಗರಿಬೆಳೆ, ಕಡಲೆಬೆಳೆ, ಬೆಲ್ಲ ಸೇರಿದಂತೆ ಇತರೆ ವಸ್ತುಗಳ ಕಿಟ್ ನೀಡಿದ್ದಾರೆ. ಇನ್ನು ಬಿಪಿ, ಶುಗರ್ ಇದ್ದವರಿಗೆ ವೈದ್ಯಮಿತ್ರರಾದ ರಾಜು ಆಲಗೂರ, ಡಾ.ಉಮದಿ ಅವರ ಸಹಾಯದಿಂದ ಮಾತ್ರೆ ಹಂಚಲು ಸಿದ್ಧರಾಗಿದ್ದಾರೆ.
ಹೀಗೆ ತಮ್ಮೂರಿನಲ್ಲಿ ಕೋವಿಡ್ 19ನಿಂದ ಪರಿತಪಿಸ್ತಿರುವ ಜನರಿಗೆ ಸಹಾಯ ಮಾಡ್ತಿದ್ದಾರೆ. ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಬೇರೆ ಬೇರೆ ಊರಿನಲ್ಲಿರುವ ಗೆಳೆಯರು ಹಣದ ನೆರವು ನೀಡಿದ್ರೆ, ಅಧ್ಯಕ್ಷ ಮಡು ಕರದಾಳಿ ಮತ್ತು ಆರೂರ ಗೆಳೆಯರ ಬಳಗದ ಸದಸ್ಯರು ಗ್ರಾಮಗಳ ತುಂಬಾ ಪೂರೈಕೆ ಮಾಡಿದ್ದಾರೆ. ಈ ಮುಖೇನ ನಾವು ಬರೀ ಹೋರಾಟ, ಪ್ರತಿಭಟನೆ ಮಾಡಿಕೊಂಡು ಸುಮ್ಮನೆ ಕುಂತಿಲ್ಲ ಒಂದಿಷ್ಟು ಸಮಾಜಮುಖಿ ಕೆಲಸಗಳನ್ನ ಸಹ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದೀಗ ಚಂದ್ರು ಹಂಚಲಿ, ಬಸು ಪಾಟೀಲ, ಅರುಣ, ಮಡು ಸೇರಿದಂತೆ ಅನೇಕರು ಗೆಳೆಯರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.