ಪ್ರಜಾಸ್ತ್ರ ಸುದ್ದಿ
ನವದೆಹಲಿ: ರಾಷ್ಟ್ರ ರಾಜಧಾನಿಯ ಅಧಿಕಾರ ಸಂಬಂಧ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಲೆಫ್ಟಿನೆಂಟ್ ಗವರ್ನರ್ ನಡುವಿನ ವಿವಾದ ಸುಪ್ರೀಂ ಕೋರ್ಟ್ ತನಕ ಹೋಗಿತ್ತು. ಗುರುವಾರ ಕೇಜ್ರಿವಾಲ್ ನೇತೃತ್ವದ ಸರ್ಕಾರಕ್ಕೆ ಗೆಲುವು ಸಿಕ್ಕಿದೆ.
ಚುನಾಯಿತ ಸರ್ಕಾರಕ್ಕೆ ಆಡಳಿತಾತ್ಮಕ ವಿಷಯದಲ್ಲಿ ಅಧಿಕಾರ ಇರಬೇಕು ಎಂದು ಸುಪ್ರೀಂ ಹೇಳಿದೆ. ಐವರು ನ್ಯಾಯಮೂರ್ತಿಗಳಿದ್ದ ಸಂವಿಧಾನಿಕ ಪೀಠ, ಜನರಿಂದ ಆಯ್ಕೆ ಆದ ಸರ್ಕಾರಕ್ಕೆ ಆಡಳಿತಾತ್ಮಕ ವಿಷಯದಲ್ಲಿ ಅಧಿಕಾರ ಇರಬೇಕು ಎಂದು ತೀರ್ಪು ನೀಡಿದೆ.
ಕಾನೂನು ರೂಪಿಸಲು, ತಮ್ಮ ಇಚ್ಛೆಯಂತೆ ಇರಲು ಜನರು ಅಧಿಕಾರ ಕೊಟ್ಟಿದ್ದಾರೆ. ಹೀಗಿರುವಾಗ ಅಧಿಕಾರಿಗಳನ್ನು ನಿಯಂತ್ರಿಸಲು ಸರ್ಕಾರಕ್ಕೆ ಬಿಡದಿದ್ದರೆ, ಅವರನ್ನು ಜವಾಬ್ದಾರರನ್ನಾಗಿ ಮಾಡದಿದ್ದರೆ ಶಾಸಕಾಂಗ ಹಾಗೂ ಸಾರ್ವಜನಿಕರಿಗೆ ಸರ್ಕಾರದ ಮೇಲಿನ ಜವಾಬ್ದಾರಿ ದುರ್ಬಲಗೊಳ್ಳುತ್ತದೆ ಎಂದು ಪೀಠ ಹೇಳಿದೆ. ಈ ಮೂಲಕ ದೆಹಲಿ ಸರ್ಕಾರಕ್ಕೆ ಕೇಂದ್ರದ ಜೊತೆಗಿನ ಜಟಾಪಟಿಯಲ್ಲಿ ಜಯ ಸಿಕ್ಕಿದೆ. ಈ ಕುರಿತು ಮಾತನಾಡಿರುವ ಸಿಎಂ ಕೇಜ್ರಿವಾಲ್ ಪ್ರಜಾಪ್ರಭುತ್ವ ಗೆದ್ದಿದೆ ಎಂದಿದ್ದಾರೆ.