ಮುಂಬೈ: ಮಹಾರಾಷ್ಟ್ರದಲ್ಲಿನ ರಾಜಕಾರಣ ಸಾಕಷ್ಟು ಕುತೂಹಲ ಮೂಡಿಸಿದೆ. ಬಿಜೆಪಿ ಹಾಗೂ ಶಿವಸೇನೆ ನಡುವೆ ಒಮ್ಮತ ಮೂಡ್ತಿಲ್ಲ. ಹೀಗಾಗಿ ಸರ್ಕಾರ ರಚನೆಯ ಕಸರತ್ತು ಜೋರಾಗಿದೆ. ಬಿಜೆಪಿ ತನ್ನ ಡಿಮ್ಯಾಂಡ್ಸ್ ಒಪ್ಪುತ್ತಿಲ್ಲವೆಂದು ಶಿವಸೇನೆ ಸುಮ್ಮನೆ ಕುಳ್ತಿಲ್ಲ. ಶಿವಸೇನೆ ಶಾಸಕಾಂಗದ ಪಕ್ಷದ ನಾಯಕನನ್ನಾಗಿ ಏಕನಾಥ ಶಿಂಧೆ ಅವರನ್ನ ಆಯ್ಕೆ ಮಾಡಿದೆ.
ಮೊದಲ ಬಾರಿಗೆ ಶಾಸಕರಾಗಿರುವ ಆದಿತ್ಯ ಠಾಕ್ರೆ ಮೈತ್ರಿ ಸರ್ಕಾರದ ಒಂದು ಭಾಗವಾಗುತ್ತಾರೆ ಅಂತಾ ಹೇಳಲಾಗ್ತಿತ್ತು. ಇಂದು ಶಿವಸೇನೆ ಪಕ್ಷದ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ ಉದ್ಭವ್ ಠಾಕ್ರೆ ಹಾಗೂ ಆದಿತ್ಯ ಠಾಕ್ರೆ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿರುವ ಆದಿತ್ಯ ವಯಸ್ಸು ಇನ್ನು 29 ವರ್ಷ. ಶಾಸಕಾಂಗದ ಕಾರ್ಯನಿರ್ವಹಣೆಯ ಬಗ್ಗೆ ತಿಳಿದುಕೊಳ್ಳಲು ಸ್ವಲ್ಪ ಸಮಯ ಬೇಕು ಎಂದಿದ್ದಾರೆ.
ಏಕನಾಥ ಶಿಂಧೆ ಹಾಗೂ ಸುಭಾಶ ದೇಸಾಯಿ ಅವರ ಹೆಸರನ್ನ ಉದ್ಭವ್ ಠಾಕ್ರೆ ಸೂಚಿಸಿದ್ರು. ಇವರು ಈ ಹಿಂದೆ ದೇವೇಂದ್ರ ಫಡ್ನಾವಿಸ್ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ಇನ್ನು ಆದಿತ್ಯ ಠಾಕ್ರೆ ನೇತೃತ್ವದಲ್ಲಿ ಶಿವಸೇನೆ ಶಾಸಕರು ರಾಜ್ಯಪಾಲರ ಭೇಟಿಗೆ ಮುಂದಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.