ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ: ಬಿಜೆಪಿಯವರು ಸಂವಿಧಾನವನ್ನು ಮುಗಿಸಬೇಕು ಎನ್ನುತ್ತಾರೆ. ನಾವು ಇದನ್ನು ರಕ್ಷಣೆ ಮಾಡುತ್ತೇವೆ. ಸಂವಿಧಾನ ರಚನೆಗೆ ಅಂಬೇಡ್ಕರ್ ಅವರ ಕೊಡುಗೆ ಅಪಾರ. ಸಂವಿಧಾನದಲ್ಲಿ ನೀಡಿರುವ ಮೀಸಲಾತಿಯನ್ನು ತೆಗೆದುಹಾಕಲು ಬಿಜೆಪಿ ನೋಡುತ್ತಿದೆ ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರವಾಗಿ ಪ್ರಚಾರ ನಡೆಸಿದ ಅವರು, ಬಿಜೆಪಿ ಅಧ್ಯಕ್ಷರು ಈ ಸಂವಿಧಾನ ಹಿಡಿದು ಬೇಡ ಅಂತಾರೆ. ಮತ್ತೊಂದು ಕಡೆ ಪ್ರಧಾನಿ ಸಂವಿಧಾನ ನಾವು ರಕ್ಷಣೆ ಮಾಡುತ್ತೇವೆ ಅಂತಾರೆ. ದಲಿತರು, ಆದಿವಾಸಿ, ಹಿಂದುಳಿದವರ ಬಗ್ಗೆ ನಾವು ಮಾತನಾಡಿದರೆ ನಗರ ನಕ್ಸಲರು ಎನ್ನುತ್ತಾರೆ. ಪ್ರಧಾನಿ ಅವರು ಇಡೀ ದೇಶದ ಜನರ ಕ್ಷಮೆ ಕೇಳಬೇಕು ಎಂದರು.
ಪ್ರಜ್ವಲ್ ರೇವಣ್ಣ 400 ಮಹಿಳೆರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಇದೊಂದು ಸಾಮೂಹಿಕ ಅತ್ಯಾಚಾರವಾಗಿದೆ. ಇಂತಹ ಸಾಮೂಹಿಕ ಅತ್ಯಾಚಾರಿಯನ್ನು ಮುಂದೆ ಇಟ್ಟುಕೊಂಡು ಪ್ರಧಾನಿ ಮೋದಿ ಮತಯಾಚಿಸಿದ್ದಾರೆ. ಬಿಜೆಪಿಯ ಪ್ರತಿಯೊಬ್ಬ ನಾಯಕರಿಗೂ ಗೊತ್ತಿತ್ತು. ಆದರೂ ಅವರೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ವೇದಿಕೆ ಮೇಲೆ ಸಾಮೂಹಿಕ ಅತ್ಯಾಚಾರಿ ಪರವಾಗಿ ಪ್ರಚಾರ ಮಾಡಿದ್ದಾರೆ. ಈ ಮೂಲಕ ಇಡೀ ದೇಶದ ಮಹಿಳೆಯರನ್ನು ಅವಮಾನ ಮಾಡಿದ್ದಾರೆ. ಇವರು ಇಡೀ ದೇಶದ ಮಹಿಳೆಯರಿಗೆ ಕೈ ಮುಗಿದು ಕ್ಷಮೆಯನ್ನು ಕೇಳಬೇಕು.
ಇಂತಹ ಘಟನೆ ಇಡೀ ದೇಶದಲ್ಲಿ ನಡೆದಿಲ್ಲ. ಇದು ಬಿಜೆಪಿಯವರ ವಿಚಾರವಾಗಿದೆ. ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಏನು ಮಾಡಲು ಸಹ ಮುಂದಾಗುತ್ತೆ. ಹೊರ ದೇಶಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಅವರ ಕಡೆ ಎಲ್ಲ ಅಧಿಕಾರ ಇದ್ರೂ ಜರ್ಮನ್ ಗೆ ಹೋಗಲು ಬಿಟ್ಟಿದ್ದಾರೆ. ಇದು ಮೋದಿ ಗ್ಯಾರಂಟಿ. ಒಬ್ಬ ಸಾಮೂಹಿಕ ಅತ್ಯಾಚಾರಿಯನ್ನು ರಕ್ಷಣೆ ಮಾಡುತ್ತಿದೆ. ಕಳೆದ 10 ವರ್ಷಗಳಿಂದ 22 ಜನರಿಗಾಗಿ ಕೆಲಸ ಮಾಡಿದ್ದಾರೆ. ದೇಶದ ಸಂಪತ್ತು 22 ಜನರ ಜೇಬಿಗೆ ಹಾಕಿದ್ದಾರೆ. ಉದ್ಯಮಿಗಳ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ.
ಕರ್ನಾಟಕದಲ್ಲಿ ನಾವು ಐದು ಗ್ಯಾರಂಟಿ ಕೊಟ್ಟಿದ್ದೇವೆ. ನಾವು ಮಹಾಲಕ್ಷ್ಮಿ ತಂದಿದ್ದು, ಪ್ರತಿ ಬಡವರ ಕುಟುಂಬದ ಪಟ್ಟಿಯನ್ನು ಮಾಡಿದ್ದೇವೆ. ಮಹಿಳೆಗೆ 1 ಲಕ್ಷ ರೂಪಾಯಿ ಕೊಡುತ್ತೇವೆ. ಪ್ರತಿ ತಿಂಗಳು 8 ಸಾವಿರದ 500 ರೂಪಾಯಿ ನಿಮ್ಮ ಖಾತೆಗೆ ಬರುತ್ತೆ. ಈ ಮೂಲಕ ನಿಮ್ಮ ಖಾತೆಗೆ 1.24 ಸಾವಿರ ರೂಪಾಯಿ ಬರುತ್ತೆ. ಆದರೆ, ಈ ಹಣ ಮೋದಿ ಸ್ನೇಹಿತರಿಗೆ ಹೋಗುವುದಿಲ್ಲವೆಂದು ಚಿಂತೆಗೆ ಒಳಗಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಮಧು ಬಂಗಾರಪ್ಪ, ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್, ನಟ ಶಿವರಾಜಕುಮಾರ್ ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.