ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಿನ್ನೆಯ ಪಂಜಾಬ್ ನಲ್ಲಿ ನಡೆಯಬೇಕಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಲು ಆಗಿಲ್ಲ. ಪ್ರತಿಭಟನಾಕಾರರು ಅರ್ಧದಲ್ಲಿ ತಡೆದ ಪರಿಣಾಮ, ಅವರು ವಾಪಸ್ ಹೋಗಿದ್ದಾರೆ. ಇದು ದೇಶದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಗುದ್ದಾಟ ನಡೆದಿದೆ. ಇದರ ನಡುವೆ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹಿಂಸೆಗೆ ಪ್ರಚೋದನೆ ನೀಡುವ ಟ್ವೀಟ್ ಮಾಡಿದ್ದಾರೆ.
ದೇಶ್ ಕೇ ಗದ್ದಾರೋಂ ಕೋ ಗೋಲಿ ಮಾರೋ(ದೇಶ ದ್ರೋಹಿಗಳಿಗೆ ಗುಂಡು ಹೊಡಿಯಿರಿ) ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಎಲ್ಲೆಡೆಯಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಒಬ್ಬ ಮಾಜಿ ಸಚಿವ, ಶಾಸಕ, ರಾಷ್ಟ್ರೀಯ ಪಕ್ಷದ ಪ್ರಧಾನ ಕಾರ್ಯದರ್ಶಿ ಗೋಲಿ ಮಾರೋ ಎಂದು ಹೇಳುತ್ತಾರೆ ಎಂದರೆ ಇವರು ಎಷ್ಟೊಂದು ದ್ವೇಷವನ್ನು ಸೃಷ್ಟಿಸುತ್ತಿದ್ದಾರೆ. ಹಿಂಸೆಗೆ ಪ್ರಚೋದನೆ ಕೊಡುತ್ತಿದ್ದಾರೆ ನೋಡಿ ಎಂದು ಕಿಡಿ ಕಾರುತ್ತಿದ್ದು, ಟ್ವೀಟ್ ಡಿಲಿಟ್ ಮಾಡಿ ಕ್ಷಮೆ ಕೋರಬೇಕು ಎಂದಿದ್ದಾರೆ.