ಬೆಂಗಳೂರು: ಮಾಜಿ ಸಚಿವ, ಶಾಸಕ ಡಿ.ಕೆ ಶಿವಕುಮಾರವರನ್ನ ಇಡಿ ಅಧಿಕಾರಿಗಳು ಬಂಧಿಸಿರುವುದನ್ನ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗಿದೆ. ಆದ್ರೆ, ಪ್ರತಿಭಟನೆ ಹಿಂಸಾರೂಪಕ್ಕೆ ತಾಳಿದ್ದು ಮಾತ್ರ ವಿಪರ್ಯಾಸ.
ಡಿ.ಕೆ ಶಿವಕುಮಾರ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ರು. ಸರ್ಕಾರಿ ಬಸ್ ಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ರು. ಇದೀಗ ಕೆಎಸ್ಆರ್ ಟಿಸಿ ಹೇಳುವ ಪ್ರಕಾರ 18 ಬಸ್ ಗಳಿಗೆ ಹಾನಿಯಾಗಿದೆ. ಇದರಲ್ಲಿ ಎರಡು ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿವೆ. 16 ಬಸ್ ಗಳ ಗಾಜುಗಳು ಸಂಪೂರ್ಣ ಪುಡಿಪುಡಿಯಾಗಿವೆ. ಕನಕಪುರ ಒಂದರಲ್ಲೇ 12 ಬಸ್, ಬೆಂಗಳೂರು, ಉಪ್ಪಿನಂಗಡಿಯಲ್ಲಿ ತಲಾ 2 ಹಾಗೂ ಮಂಗಳೂರು ಮತ್ತು ತಾವರಕೆರೆಯಲ್ಲಿ ತಲಾ ಒಂದು ಬಸ್ ಹಾನಿ ಮಾಡಲಾಗಿದೆ ಎಂದು ಕೆಎಸ್ಆರ್ ಟಿಸಿ ಹೇಳ್ತಿದೆ.
ಶಾಲಾ-ಕಾಲೇಜುಗಳಿಗೆ ರಜೆ
ಇನ್ನು ಕಳೆದ ಎರಡು ದಿನಗಳಿಂದ ರಾಮನಗರ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇಂದು ರಾಮನಗರದಲ್ಲಿ ಬಂದ್ ಆಚರಣೆ ಮಾಡಲಾಗ್ತಿದ್ದು, ಗ್ರಾಮಾಂತರ ಪ್ರದೇಶಗಳಿಗೆ ಸಾರಿಗೆ ಸೇವೆ ಬಂದ್ ಮಾಡಲಾಗಿದೆ. ಇದಕ್ಕಲ್ಲ ಯಾರು ಹೊಣೆ ಅನ್ನೋ ಪ್ರಶ್ನೆ ಎದುರಾಗಿದೆ.