ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ವಿದ್ಯುತ್ ಅನಾಹುತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಶನಿವಾರ ಇಲ್ಲಿಯ ಶಾಹುನಗರದಲ್ಲಿ ನಡೆದಿದೆ. ಘಟನೆ ಬಗ್ಗೆ ತಿಳಿದ ಗ್ರಾಮಾಂತರ ಶಾಸಕಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದುರಂತದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದರು. ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಕೋರಿದರು. ಅದರಂತೆ ತಲಾ 2 ಲಕ್ಷ ರೂಪಾಯಿ ಘೋಷಿಸಲಾಗಿದೆ. ಜೊತೆಗೆ ಲಕ್ಷ್ಮಿತಾಯಿ ಫೌಂಡೇಶನ್ ವತಿಯಿಂದಲೂ ತುರ್ತು ಸಹಾಯ ಮಾಡಿರುವುದಾಗಿ ತಿಳಿಸಿದರು.
ದುಡಿಯಲು ಪರ ಜಿಲ್ಲೆಯಿಂದ ಬಂದ ಈರಣ್ಣ ಲಮಾಣಿ ಕುಟುಂಬಸ್ಥರು ಕಟ್ಟಡ ಕಾರ್ಮಿಕ ಕೆಲಸ ಮಾಡುತ್ತಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿ ವಾಚ್ ಮನ್ ಆಗಿದ್ದ ಈರಣ್ಣ, ಪಕ್ಕದಲ್ಲಿ ತಗಡಿನ ಶೆಡ್ ನಿರ್ಮಿಸಿಕೊಂಡಿದ್ದರು. ಇಂದು ಮುಂಜಾನೆ ನೀರು ಕಾಯಿಸಲು ವಿದ್ಯುತ್ ಕಾಯಿಲ್ ಹಚ್ಚಿದ್ದಾರೆ. ಶೆಡ್ಡಿಗೆ ತಾಗಿಸಿ ಕಬ್ಬಿಣದ ರಾಡ್ ಇಡಲಾಗಿದೆ. ಇದನ್ನು ಮುಟ್ಟಿದ ಪರಿಣಾಮ 3ನೇ ತರಗತಿ ಓದುತ್ತಿದ್ದ ಅನ್ನಪೂರ್ಣ(08) ಅನ್ನೋ ಬಾಲಕಿ, ಅಜ್ಜ ಈರಣ್ಣ(50), ಅಜ್ಜಿ ಶಾಂತವ್ವ(45) ಮೃತಪಟ್ಟಿದ್ದಾರೆ.