ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವ, ಹಾನಗಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ಎಂ ಉದಾಸಿ ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಬಹುಅಂಗಾಗ ವೈಫಲ್ಯದಿಂದ ಕಳೆದ 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ 84 ವರ್ಷದ ಶಾಸಕ, ನಾರಾಯಣ ಹೃದಯಾಲಾಯದಲ್ಲಿ ಕೊನೆಯುಸಿರೆಳೆದಿದ್ದಾರೆ.
ಬುಧವಾರ ಸಂಜೆ ಸುಮಾರು 5ಗಂಟೆಯ ಹೊತ್ತಿನಲ್ಲಿ ಹುಟ್ಟೂರು ಹಾನಗಲ್ ನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. 1983ರಲ್ಲಿ ಮೊದಲ ಬಾರಿಗೆ ಶಾಸಕರಾದರು. ಮುಂದೆ 1994ರಲ್ಲಿ ಮತ್ತೆ ಶಾಸಕರಾಗಿ, ಜೆ.ಎಚ್ ಪಟೇಲರ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ರು.
1999ರಲ್ಲಿ ಸೋಲು ಅನುಭವಿಸಿದ ಸಿ.ಎಂ ಉದಾಸಿ, 2006ರಲ್ಲಿ ಗೆದ್ದು ಯಡಿಯೂರಪ್ಪ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿದ್ರು. 2008ರಲ್ಲಿ ಹಾವೇರಿ ಉಸ್ತುವಾರಿ ಸಚಿವರಾಗಿದ್ರು.
2013ರ ಚುನಾವಣೆಯಲ್ಲಿ ಸೋತರು. 2018ರ ಚುನಾವಣೆಯಲ್ಲಿ ಗೆದ್ದರು. ಹೀಗೆ ಸೋಲು ಗೆಲುವು ಕಂಡ ಸಿ.ಎಂ ಉದಾಸಿ ನಿಧನಕ್ಕೆ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.