ಪ್ರಜಾಸ್ತ್ರ ಅಪರಾಧ ಸುದ್ದಿ
ಬೆಂಗಳೂರು: ಕಳ್ಳರನ್ನ ಹಿಡಿದು ಕಂಬಿ ಹಿಂದೆ ತಳ್ಳಬೇಕಾದ ಪೊಲೀಸರೆ ಅವರೊಂದಿಗೆ ಸೇರಿ ಮಾಡಬಾರದು ಮಾಡಲು ಹೋಗಿ, ಜೈಲು ಸೇರಿರುವ ಘಟನೆ ನಗರದಲ್ಲಿ ನಡೆದಿದೆ. ಈ ಸಂಬಂಧ 7 ಜನರನ್ನ ಬಂಧಿಸಲಾಗಿದೆ.
ನವೆಂಬರ್ 11ರಂದು ನಗರ್ತಪೇಟೆ ಅಣ್ಣಯ್ಯ ಬೀದಿಯಲ್ಲಿರುವ ಚಿನ್ನದ ಅಂಗಡಿಯೊಂದಕ್ಕೆ ಪೊಲೀಸ್ ದಾಳಿ ಹೆಸರಿನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಅಂಗಡಿ ಮಾಲೀಕ ಕಾರ್ತಿಕಗೆ ನೀನು ಪರವಾನಿಗೆ ಇಲ್ಲದೆ ವ್ಯಾಪಾರ ಮಾಡ್ತಿರುವೆ. ಕದ್ದ ಚಿನ್ನದ ವಸ್ತುಗಳನ್ನ ಖರೀದಿ ಮಾಡ್ತಿರುವೆ. ಇದಕ್ಕೆ ನಮ್ಮ ಬಳಿ ದಾಖಲೆ ಇವೆ ಎಂದು ಹೆದರಿಸಿದ್ದಾರೆ.
ಹೀಗೆ ಚಿನ್ನದಂಗಡಿ ಮಾಲೀಕನಿಗೆ ಆವಾಜ್ ಹಾಕಿ 9 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ನಂತರ ಕಾರ್ತಿಕ ತನ್ನ ಪರಿಚಯಸ್ಥ ಪೊಲೀಸರೊಬ್ಬರ ಮೂಲಕ ದಾಳಿ ಬಗ್ಗೆ ಮಾಹಿತಿ ಕೇಳಿದಾಗ, ಅದು ಅಸಲಿ ದಾಳಿ ಅಲ್ಲ. ನಕಲಿ ದಾಳಿ ಅನ್ನೋದು ಗೊತ್ತಾಗಿದೆ. ಕೂಡಲೇ ಆತ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಪೊಲೀಸರ ಹೆಸರಿನಲ್ಲಿ ನಕಲಿ ದಾಳಿ ನಡೆಸಿದ 7 ಜನರನ್ನ ಬಂಧಿಸಿದ್ದಾರೆ. ಅದರಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಅಶೋಕ ಹಾಗೂ ಚೌಡೇಗೌಡ ಅನ್ನೋರು ಸಹ ಶಾಮೀಲಾಗಿದ್ದಾರೆ. ಪೇದೆ ಅಶೋಕ ಸಿಕ್ಕಿಬಿದ್ದಿದ್ದು ಚೌಡೇಗೌಡ ತಲೆಮರೆಸಿಕೊಂಡಿದ್ದಾನೆ. ಕಳ್ಳರ ಕೈಗೆ ಕೋಳ ಹಾಕಬೇಕಾದವರೆ ಅವರೊಂದಿಗೆ ಕೈ ಮಿಲಾಯಿಸಿ ಅಂದರ್ ಆಗಿದ್ದಾರೆ.