ಪ್ರಜಾಸ್ತ್ರ ಅಪರಾಧ ಸುದ್ದಿ
ಬೆಂಗಳೂರು: ನಕಲಿ ಪೊಲೀಸರ ಗ್ಯಾಂಗ್ ರೆಡಿ ಮಾಡಿ ಸ್ನೇಹಿತನ ಬಳಿಯೇ ದರೋಡೆ ಮಾಡಿಸಿದ ಘಟನೆ ಸಂಬಂಧ ನಾಲ್ವರನ್ನ ಬಂಧಿಸಲಾಗಿದೆ. ಶರತ ಶೆಟ್ಟಿ, ಮೋಹನಕುಮಾರ, ಪೂರ್ವಿಕರಾಜ ಹಾಗೂ ದೂರು ನೀಡಿದವನ ಗೆಳೆಯ ತಪನ್ ರಾಯ್ ಬಂಧಿತ ಆರೋಪಿಗಳು.
ಕಳೆದ ಮೇ 30ರಂದು ತಪನ್ ರಾಯ್ ಗೆಳೆಯ ತಪನ್ ಬಿಸ್ವಾಸ್ ನನ್ನ ಪುಸಲಾಯಿಸಿ ನೈಸ್ ರಸ್ತೆ ಕಡೆ ಕರೆದುಕೊಂಡು ಬಂದಿದ್ದಾನೆ. ಆಗ ಅಲ್ಲಿ ಮುಫ್ತಿಯಲ್ಲಿರುವ ಪೊಲೀಸರ ಸೋಗಿನಲ್ಲಿ ಮೂವರು ಬಂದು ಇವರ ಬೈಕ್ ಅಡ್ಡಗಟ್ಟಿದ್ದಾರೆ. ಕೋವಿಡ್ ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ದೀರಿ ಎಂದು ಹೇಳಿ, ಬೈಕ್, ಮೊಬೈಲ್, ಎಟಿಎಂ ಕಾರ್ಡ್ ದೋಚಿದ್ದಾರೆ. ಬ್ಯಾಡರಹಳ್ಳಿ ಠಾಣೆಗೆ ಮರುದಿನ ಬಂದು ದಾಖಲೆ ತೋರಿಸಿ ನಿನ್ನ ವಸ್ತು ತೆಗೆದುಕೊಂಡು ಹೋಗು ಎಂದಿದ್ದಾರೆ.
ಬಿಸ್ವಾಸ್ ಜೊತೆಯಲ್ಲಿಯೇ ಇದ್ದ ತಪನ್ ರಾಯ್ ಮಾಡಿದ ಪ್ಲಾನ್ ನಿಂದಾಗಿ ಇವನು ಮೋಸ ಹೋಗಿದ್ದಾನೆ. ಮರುದಿನ ಬ್ಯಾಡರಹಳ್ಳಿ ಠಾಣೆಗೆ ಹೋಗಿ ವಿಚಾರಿಸಿದ್ರೆ ಆ ಹೆಸರಿನ ಪೊಲೀಸರು ಇಲ್ಲ ಎಂದಿದ್ದಾರೆ. ಅಲ್ಲಿ ಅವನ ಬೈಕ್ ಸಹ ಇಲ್ಲ. ಹೀಗಾಗಿ ಬಿಸ್ವಾಸ್ ದೂರು ನೀಡಿದ್ದಾನೆ. ಅಷ್ಟರಲ್ಲಿ ಆಗ್ಲೇ ಅವರು ಬಿಸ್ವಾಸ್ ಅಕೌಂಟ್ ನಿಂದ 80 ಸಾವಿರ ರೂಪಾಯಿ ಡ್ರಾ ಮಾಡಿದ್ದಾರೆ.
ತನಿಖೆ ನಡೆಸಿದ ಪೊಲೀಸರಿಗೆ ಸುಳಿವು ಸಿಕ್ಕಿದೆ. ಬಿಸ್ವಾಸ್ ಅಕೌಂಟ್ ನಿಂದ ಕೆನರಾ ಬ್ಯಾಂಕ್ ಹಣ ವರ್ಗಾವಣೆಯಾಗಿದೆ. ಆ ಬ್ಯಾಂಕಿನ ವಿವರ ಪಡೆದಾಗಿ ಬಸವೇಶ್ವರ ನಗರದ ಶರತ ಶೆಟ್ಟಿ ಸಿಕ್ಕಿದ್ದಾನೆ. ಅವನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಕಹಾನಿ ಗೊತ್ತಾಗಿದೆ. ಈ ವಂಚನೆಯ ಸೂತ್ರದಾರ ತಪನ್ ಬಿಸ್ವಾಸ್ ಸ್ನೇಹಿತ ತಪನ್ ರಾಯ್ ಆಗಿರುವುದು ತಿಳಿದಿದೆ. ಈಗ ನಾಲ್ವರನ್ನ ಬಂಧಿಸಲಾಗಿದೆ.