ಪ್ರಜಾಸ್ತ್ರ ಸುದ್ದಿ
ಕಲಬುರಗಿ: ಮಕ್ಕಳಿಬ್ಬರನ್ನು ಬೆನ್ನಿಗೆ ಕಟ್ಟಿಕೊಂಡು ತಂದೆಯೊಬ್ಬರು ಬಾವಿಗೆ ಹಾರಿದ ಪರಿಣಾಮ ಮೂವರು ಪ್ರಾಣ ಕಳೆದುಕೊಂಡ ಘಟನೆ ಜಿಲ್ಲೆಯ ಕುಂಚಾವರಂ ಗ್ರಾಮದಲ್ಲಿ ಭಾನುವಾರ ನಡೆದಿದೆ. ಹಣಮಂತ ಸಂಜಪ್ಪ ವಡ್ಡರ(40), ಮಕ್ಕಳಾದ ಓಂಕಾರ(9) ಹಾಗೂ ಅಕ್ಷರಾ(6) ಮೃತ ದುರ್ದೈವಿಗಳು.
ಕೆಲ ವರ್ಷಗಳಿಂದ ತೆಲಂಗಾಣದ ತಾಂಡೂರಿನಲ್ಲಿ ಮನೆ ಕಟ್ಟಿಕೊಂಡು ನೆಲೆಸಿದ್ದ. ಆದರೆ, ಇತ್ತೀಚೆಗೆ ಹೈದ್ರಾಬಾದ್ ಗೆ ಹೋಗಿದ್ದ ಇತ ಶುಕ್ರವಾರ ಕುಂಚಾವರಂಗೆ ಬಂದಿದ್ದಾನೆ. ಸಹೋದರ ಗೋಪಾಲನಿಗೆ ಫೋನ್ ಮಾಡಿ ಮಕ್ಕಳೊಂದಿಗೆ ಬಾವಿಗೆ ಬಿದ್ದು ಸಾಯುತ್ತಿದ್ದೇನೆ. ಶವ ತೆಗೆದು ಅಂತ್ಯಸಂಸ್ಕಾರ ಮಾಡಿ ಎಂದಿದ್ದಾನೆ. ಸಹೋದರ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾನೆ.
ಕರ್ನಾಟಕ ಹಾಗೂ ತೆಲಂಗಾಣ ಪೊಲೀಸರು ಹುಡುಕಿದರೂ ಮೂವರು ಪತ್ತೆಯಾಗಿಲ್ಲ. ಭಾನುವಾರ ಕುಂಚಾವರಂ ಗ್ರಾಮದ ಹತ್ತಿರದ ಪೋಚಾವರಂ ಗ್ರಾಮದ ತೋಟದ ಬಾವಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಅನ್ಯಾಯವಾಗಿ ಏನು ತಿಳಿಯದ ಮಕ್ಕಳು ಸಹ ಮೃತಪಟ್ಟಿರುವುದಕ್ಕೆ ಕುಟುಂಬಸ್ಥರಲ್ಲಿ, ಊರಲ್ಲಿ ದುಃಖ ಮಡುಗಟ್ಟಿದೆ.