ಪ್ರಜಾಸ್ತ್ರ ಸುದ್ದಿ
ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಹತ್ತಿರ ಬಂದಿದೆ. ಹೀಗಾಗಿ ಅಭ್ಯರ್ಥಿಗಳು ಭರ್ಜರಿಯಾಗಿ ರೊಡ್ ಶೋ ಮಾಡುವ ಮೂಲಕ ನಾಮಪತ್ರ ಸಲ್ಲಿಸುತ್ತಿದ್ದಾರೆ. ಚುನಾವಣೆ ಎಂದ ಮೇಲೆ ಅಲ್ಲೊಂದಿಷ್ಟು ತಾರಾ ಮೆರಗು ಬರಲೇಬೇಕು ಹೀಗಾಗಿ ಕನ್ನಡ ಚಿತ್ರರಂಗದ ಸ್ಟಾರ್ ನಟ, ನಟಿಯರು ತಮ್ಮ ಆಪ್ತರ, ಸ್ನೇಹಿತರ ಪರ ಪ್ರಚಾರ ಶುರು ಮಾಡಿದ್ದಾರೆ.
ನಟ ದರ್ಶನ್, ತಮ್ಮ ಆಪ್ತ ಹಾಗೂ ಶ್ರೀರಂಗಪಟ್ಟಣದ ಬಿಜೆಪಿ ಅಭ್ಯರ್ಥಿ ಎಚ್.ಸಚ್ಚಿದಾನಂದ ಪರ ಪ್ರಚಾರ ನಡೆಸಿದರು. ನಾಮಪತ್ರ ಸಲ್ಲಿಕೆ ವೇಳೆ ಸಂಸದೆ ಸುಮಲತಾ ಅಂಬರೀಶ್ ಅವರೊಂದಿಗೆ ಭಾಗವಹಿಸಿದ ಅವರು, ಮೇ 10ರಂದು ಸಚ್ಚಿದಾನಂದ ಪರ ಮತ ಚಲಾಯಿಸಿ ಗೆಲುವಿನ ಊಡುಗೊರೆ ನೀಡಿ ಎಂದರು.
ಇತ್ತ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ನಟ ವಿಜಯ ರಾಘವೇಂದ್ರ ಮತಯಾಚನೆ ನಡೆಸಿದರು. ಕೈ ಅಭ್ಯರ್ಥಿ ರಕ್ಷಿತ್ ಶಿವರಾಮ್, ನಟ ವಿಜಯ ರಾಘವೇಂದ್ರ ಅವರ ಭಾಮೈದನ ಆಗಿದ್ದು ಪ್ರಚಾರದಲ್ಲಿ ಭಾಗವಹಿಸಿ ಮತಯಾಚನೆ ನಡೆಸಿದರು.
ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಕೆ ಮಾಡಿದರು. ರಕ್ಷಿತ್ ನನ್ನ ಭಾಮೈದ ಆಗಿದ್ದಾರೆ. ಅವರ ಪರ ಪ್ರಚಾರ ಮಾಡುವುದು ನನ್ನ ಕರ್ತವ್ಯ. ಮುಂದೆಯೂ ಮಾಡುತ್ತೇನೆ ಎಂದು ನಟ ವಿಜಯ ರಾಘವೇಂದ್ರ ಹೇಳಿದರು.
ಇನ್ನು ನಟ ಸುದೀಪ್, ಸಿಎಂ ಬೊಮ್ಮಾಯಿ ಅವರ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ. ಯಾವಾಗ, ಎಲ್ಲಿಂದ ಪ್ರಚಾರ ನಡೆಸುತ್ತಾರೆ ಅನ್ನೋ ಕುತೂಹಲವಿದೆ. ಜೊತೆಗೆ ಬೊಮ್ಮಾಯಿ ಅವರೊಂದಿಗೆ ಮತ್ಯಾವ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುತ್ತಾರೆ ಕಾದು ನೋಡಬೇಕಿದೆ.