ಪ್ರಜಾಸ್ತ್ರ ಸುದ್ದಿ
ಚೆನ್ನೈ: ಈ ಜೋಡಿಗೆ ಸಂಸಾರಿಕ ಜೀವನದ ಮೊದಲ ರಾತ್ರಿಯೇ ಕೊನೆ ರಾತ್ರಿಯಾಗಿದೆ. ಹೊಸ ಜೀವನ ಆರಂಭಿಸುವ ಹೊತ್ತಿನಲ್ಲಿಯೇ ದುರಂತ ಅಂತ್ಯ ಕಂಡಿದೆ ಇವರ ಜೀವನ. ಇದೇನು ವಿಧಿಯಾಟವೋ.. ಪತಿಯ ಹುಚ್ಚಾಟವೋ ಗೊತ್ತಿಲ್ಲ.. ಒಟ್ಟಿನಲ್ಲಿ ಎರಡು ಜೀವಗಳು ಹೋಗಿವೆ.
20 ವರ್ಷದ ಸಂಧ್ಯಾ ಮೊದಲ ರಾತ್ರಿಯ ದಿನವೇ ಪತಿಯಿಂದಲೇ ಕೊಲೆಯಾಗಿದ್ದಾಳೆ. ಪತಿ 24 ವರ್ಷದ ನೀತಿವಾಸನ್ ನೇಣಿಗೆ ಶರಣಾಗಿದ್ದಾನೆ. ಇದರಿಂದ ಇಡೀ ಕುಟುಂಬದಲ್ಲಿ ಬರಸಿಡಿಲು ಬಡಿದಂತಾಗಿದೆ. ಸಂತೋಷ ತುಂಬಿರಬೇಕಾದ ಮನೆಯಲ್ಲಿ ನೀರವಮೌನ ಆವರಿಸಿಕೊಂಡಿದೆ.
ಕರೋನಾ ಲಾಕ್ ಡೌನ್ ಕಾರಣಕ್ಕೆ, ನೀತಿವಾಸನ್ ಹಾಗೂ ಸಂಧ್ಯಾ ಮದುವೆಯನ್ನ 20 ಜನ ಸಂಬಂಧಿಕರು ಮಾತ್ರ ಸೇರಿಕೊಂಡು ಚೆನ್ನೈನ ಮಿಂಜೂರಿನಲ್ಲಿ ಮಾಡಲಾಗಿದೆ. ಅದೆ ದಿನ ರಾತ್ರಿ ನವ ವಧು, ವರನ ರೂಮಿಗೆ ಹೋಗಿದ್ದಾಳೆ. ಸ್ವಲ್ಪ ಹೊತ್ತಿನ ಬಳಿಕ ಯುವತಿ ಜೋರಾಗಿ ಚೀರಿದ ಶಬ್ಧ ಕೇಳಿಸಿದೆ. ಮನೆಯವರೆಲ್ಲ ಎದ್ದು ಬಂದು ಬಾಗಿಲು ಬಡೆದಿದ್ದಾರೆ. ನೀತಿವಾಸನ್ ಬಾಗಿಲು ತೆರೆದು ಅವರನ್ನ ತಳ್ಳಿ ಓಡಿ ಹೋಗಿದ್ದಾನೆ.
ರೂಮಿನೊಳಗೆ ಹೋಗಿ ನೋಡಿದ ಮನೆಯವರಿಗೆ ಯುವತಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡು ಶಾಕ್ ಆಗಿದೆ. ತಕ್ಷಣ ಆಕೆಯನ್ನ ಆಸ್ಪತ್ರೆ ಸೇರಿಸಿದ್ದಾರೆ. ಅಷ್ಟರಲ್ಲಿಯೇ ಆಕೆ ಪ್ರಾಣಪಕ್ಷಿ ಹಾರಿಹೋಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಲ್ಲರೂ ಸೇರಿ ಪತಿ ನೀತಿವಾಸನ್ ನನ್ನ ಹುಡುಕಿದಾಗ, ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಕಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ, ಬಾಳಿ ಬದುಕಬೇಕಾಗಿದ್ದ ಎರಡು ಜೀವಗಳು ಹೀಗ್ಯಾಕೆ ಸಾವನ್ನಪ್ಪಿ, ಸಾವಿರಾರು ಪ್ರಶ್ನೆಗಳನ್ನ ಉಳಿಸಿ ಹೋದರು ಗೊತ್ತಿಲ್ಲ.