ಪ್ರಜಾಸ್ತ್ರ ಸುದ್ದಿ
ವಿಜಯಪುರ: ಗುಮ್ಮಟನಗರಿ ವಿಜಯಪುರ ಜಿಲ್ಲೆಯ ತುಂಬಾ ಶುಕ್ರವಾರ ಭರ್ಜರಿ ಮಳೆಯಾಗಿದೆ. ಬೆಳಗ್ಗೆಯಿಂದ ಶುರುವಾದ ಮಳೆ, ಸತತವಾಗಿ ಸಂಜೆಯವರೆಗೂ ಸುರಿದಿದೆ. ವರುಣನ ಆರ್ಭಟಕ್ಕೆ ಜಿಲ್ಲೆಯ ಜನತೆಯ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.
ಇಡೀ ದಿನ ಮಳೆ ಬಿಟ್ಟು ಬಿಟ್ಟು ಬಂದಿದೆ. ಮುಂಗಾರು ಆರಂಭವಾಗಿದ್ದರಿಂದ ಕೃಷಿ ಚಟುವಟಿಕೆಗಳು ಶುರುವಾಗಿವೆ. ರೈತಾಪಿ ವರ್ಗದ ಕೆಲಸ ಬಿರುಸಿನಿಂದ ಕೂಡಿದೆ. ಇಂದು ಸುರಿದ ಮಳೆ ಮತ್ತಷ್ಟು ಖುಷಿ ನೀಡಿದೆ. ವಿಜಯಪುರ ನಗರ, ತಾಲೂಕು, ಮುದ್ದೇಬಿಹಾಳ, ಕೊಲ್ಹಾರ, ನಿಡಗುಂದಿ, ಬಬಲೇಶ್ವರ, ಬಸವನಬಾಗೇವಾಡಿ, ದೇವರಹಿಪ್ಪರಗಿ, ಸಿಂದಗಿ, ಆಲಮೇಲ, ತಾಳಿಕೋಟಿ, ಕಲಕೇರಿ, ಇಂಡಿ, ಚಡಚಣ ಸೇರಿದಂತೆ ಎಲ್ಲೆಡೆ ಮಳೆ ಅಬ್ಬರಿ ಜೋರಾಗಿತ್ತು.
ಮಳೆಯ ಆರ್ಭಟಕ್ಕೆ ಕೆಲವು ಕಡೆ ಮರಗಳು ಧರೆಗುರುಳಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇನ್ನು ಕೆಲವು ಕಡೆ ವಿದ್ಯುತ್ ಸಮಸ್ಯೆಯಾಗಿದೆ. ಮುಂಜಾನೆಯಿಂದ ಪ್ರಾರಂಭವಾದ ಮಳೆಯಿಂದಾಗಿ ವ್ಯಾಪಾರ ವಹಿವಾಟಕ್ಕೂ ತೊಂದರೆಯಾಗಿದೆ.