ಹುಬ್ಬಳ್ಳಿ: ಹುಬ್ಬಳ್ಳಿಯ ಸಬ್ ಜೈಲ್ ಮುಂದೆ ಎರಡು ಗುಂಪುಗಳ ಮಧ್ಯೆ ಗ್ಯಾಂಗ್ ವಾರ್ ನಡೆದಿದೆ. ತಲ್ವಾರ್ ,ಮಚ್ಚು ಹಿಡಿದುಕೊಂಡು ಗಲಾಟೆ ಮಾಡಲಾಗಿದೆ. ಜೈಲ್ಲಿನಲ್ಲಿದ್ದ ವ್ಯಕ್ತಿಯನ್ನ ನೋಡಲು ಬಂದಿದ್ದ ಟೀಂ ಮೇಲೆ ಅಟ್ಯಾಕ್ ಮಾಡಿದ ಘಟನೆ ನಡೆದಿದೆ.
ಜಾಮೀನು ಮೇಲೆ ಬಿಡುಗಡೆಯಾದ ಸೂರಿ ಮತ್ತು ಅವನ ತಂಡದ ಮೇಲೆ ಹಲ್ಲೆ ನಡೆಸಲಾಗಿದೆ. ಹುಬ್ಬಳ್ಳಿಯ ವಿಶ್ವೇಶ್ವರಯ್ಯನವರಗದ ಸಬ್ ಜೇಲ್ ಬಳಿ ಈ ಘಟನೆ ನಡೆದಿದೆ. ಕಳೆದ ವಾರ ಸೆಟ್ಲಮೆಂಟ್ ನಿವಾಸಿ ಹುಸೇನ್ ಬಿಜಾಪುರ ಎಂಬ ವ್ಯಕ್ತಿಗೆ ಚಾಕು ಇರಿಯಲಾಗಿತ್ತು. ಈ ಕಾರಣಕ್ಕೆ ಇದೀಗ ಗ್ಯಾಂಗ್ ವಾರ್ ನಡೆದಿದೆ ಎನ್ನಲಾಗ್ತಿದೆ.
ಈ ಹಿಂದೆ ಎರಡು ಗುಂಪುಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಬಂಧನವಾಗಿದ್ದವರನ್ನ ನೋಡಲು ಬಂದಿದ್ದ ವೇಳೆ ಸೂರಿಯ ಕಡೆಯವರ ಮೇಲೆ ಏಕಾಏಕಿ ಹಲ್ಲೆ ಮಾಡಲಾಗಿದೆ. ಈ ವೇಳೆ ಗಾಯಗೊಂಡವರನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಒಂದು ಮಾರುತಿ ಸಿಯಾಜ್ ಕಾರು ಸಂಪೂರ್ಣ ಜಖಂಗೊಂಡಿದೆ.