ಪ್ರಜಾಸ್ತ್ರ ಸುದ್ದಿ
ಮಂಗಳೂರು: ಎಂಬಿಬಿಎಸ್ ವಿದ್ಯಾರ್ಥಿ ಗಾಂಜಾ ದಂಧೆಯಲ್ಲಿ ತೊಡಗಿದ್ದರು ಅನ್ನೋ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ 9 ವೈದ್ಯಕೀಯ ವಿದ್ಯಾರ್ಥಿಗಳು ಸೇರಿ 10 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೂರಿನ ಆಧಾರದ ಮೇಲೆ ಕೇರಳ ಮೂಲದ ಸಮೀರ್, ನಾಡಿಯಾ ಸಿರಾಜ್, ತಮಿಳುನಾಡಿನ ಮಣಿಮಾರನ್ ಮುತ್ತು, ಆಂಧ್ರದ ವರ್ಷಣಿ ಪ್ರತಿ, ಪಂಜಾಬಿನ ಭಾನು ಧಾಹಿಯಾ, ರಿಯಾ ಚಡ್ಡಾ, ದೆಹಲಿಯ ಕ್ಷಿತಿಜ್ ಗುಪ್ತಾ, ಮಹಾರಾಷ್ಟ್ರದ ಇರಾ ಬಸಿನ್, ಬಂಟ್ವಾಳ ಮಾರಿಪಾಳ್ಯದ ಮೊಹಮ್ಮದ್ ರೌಫ್ ಗೌಸ್ ಹಾಗೂ ನೀಲ್ ಕಿಶೋರಿಲಾಲ್ ರಾಮ್ ಜಿ ಶಾ ಬಂಧಿತ ಆರೋಪಿಗಳು.
ನೀಲ್ ಕಿಶೋರಿಲಾಲ್ ರಾಮ್ ಜಿ ಶಾ ಯುಕೆ ಮೂಲದವನಾಗಿದ್ದಾನೆ. ಈತ ಎನ್ಐಆರ್ ಕೋಟಾದಲ್ಲಿ ಮೆಡಿಕಲ್ ಸೀಟು ಪಡೆದಿದ್ದಾನೆ. ಆದರೆ, ಕಳೆದ 15 ವರ್ಷಗಳಿಂದಲೂ ಶಿಕ್ಷಣ ಪೂರ್ಣಗೊಳಿಸಲು ಆಗಿಲ್ಲ. ಇಂತಹ ನೀಲ್ ಕಿಶೋರಿಲಾಲ್ ಗಾಂಜಾ ಪೆಡ್ಲರ್ ಆಗಿದ್ದ. ಮೊದಲು ಇವನನ್ನು ಬಂಧಿಸಲಾಯಿತು. ನಂತರ ಸಾಕ್ಷಿ ಸಮೇತ 9 ವೈದ್ಯಕೀಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳನ್ನು ಕೋರ್ಟಿಗೆ ಹಾಜರು ಪಡಿಸಲಾಯಿತು. ನಂತರ ಅವರನ್ನು 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದರು. ಬಂಧಿತ ವಿದ್ಯಾರ್ಥಿಗಳಲ್ಲಿ ಬಹುತೇಕರು 25 ವರ್ಷದ ಒಳಗಿನವರಿದ್ದಾರೆ. ಪಿಜಿ, ಹಾಸ್ಟೆಲ್ ಹಾಗೂ ಬಾಡಿಗೆ ಮನೆಯಲ್ಲಿದ್ದರು. ಅಲ್ಲಿಂದಲೇ ಅವರನ್ನು ಬಂಧಿಸಲಾಗಿದೆ.