ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಈಗಾಗ್ಲೇ ರಾಜ್ಯದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಘೋಷಣೆಯಾಗಿ ಎರಡನೇ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಹೀಗಾಗಿ ಲೋಕಲ್ ಫೈಟ್ ಜಿದ್ದಾಜಿದ್ದಿ ಜೋರಿನಿಂದ ಕೂಡಿದೆ. ಇದರ ನಡುವೆ ಇದೀಗ ಈ ಎರಡು ಜಿಲ್ಲೆಗಳಲ್ಲಿನ ಈ ಗ್ರಾಮಗಳ ಚುನಾವಣೆಯನ್ನ ಮುಂದೂಡಲಾಗಿದೆ.
ಬಾಗಲಕೋಟೆಯ ಹುನಗುಂದ ತಾಲೂಕಿನ ಹಾವರಗಿ, ಬಿಂಜವಾಡಗಿ, ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮುತ್ಕೂರು-ಕಿತ್ನೂರು ಹಾಗೂ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬಂದಾಳ ಹಾಗೂ ಕನ್ನೊಳ್ಳಿ ಗ್ರಾಮ ಪಂಚಾಯ್ತಿ ಚುನಾವಣೆಯನ್ನ ಮುಂದೂಡಲಾಗಿದೆ.
ಹುನಗುಂದ ತಾಲೂಕಿನ ಮನ್ಮಥನಾಳ ಗ್ರಾಮವನ್ನ ಹಾವರಗಿ ಗ್ರಾಮ ಪಂಚಾಯ್ತಿಯಿಂದ ಬೇರ್ಪಡಿಸಿ ಬಿಂಜವಡಗಿ ಗ್ರಾಮ ಪಂಚಾಯ್ತಿಗೆ ಸೇರ್ಪಡಿಸಲಾಗಿದೆ. ಇನ್ನು ಬಳ್ಳಾರಿ ಜಿಲ್ಲೆಯ ಮುತ್ಕೂರು ಗ್ರಾಮ ಪಂಚಾಯ್ತಿಗೆ 14 ಸ್ಥಾನಗಳಿವೆ. 2015ರಲ್ಲಿ 8 ಸ್ಥಾನಗಳಿಗೆ ಮಾತ್ರ ಆಯ್ಕೆಯಾಗಿದೆ. ಬಳಿಕ ನಡೆದ ಉಪ ಚುನಾವಣೆಯಲ್ಲಿ 6 ಸ್ಥಾನಗಳಿಗೆ ಆಯ್ಕೆ ಮಾಡಲಾಗಿದೆ. ಹೀಗೆ ಆಯ್ಕೆಯಾದ 6 ಜನ ಸದಸ್ಯರ ಅವಧಿ ಮುಗಿದಿಲ್ಲ. ಹೀಗಾಗಿ ಅವಧಿ ಮುಗಿಯುವ ಮೊದ್ಲೇ ಚುನಾವಣೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಓತಿಹಾಳ ಗ್ರಾಮವನ್ನ ಕನ್ನೊಳ್ಳಿ ಗ್ರಾಮ ಪಂಚಾಯ್ತಿಗೆ ಸೇರ್ಪಡೆ ಮಾಡಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ. ಗ್ರಾಮ ಬದಲಾವಣೆ ಬಗ್ಗೆ ಪ್ರಶ್ನಿಸಲಾಗಿದೆ. ಹೀಗೆ ಈ ಮೂರು ಜಿಲ್ಲೆಗಳ ಈ ಗ್ರಾಮಗಳಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ಅಂತಿಮ ಆದೇಶ ಬರುವ ತನಕ ಚುನಾವಣೆ ಮುಂದೂಡುವಂತೆ ಆದೇಶಿಸಲಾಗಿದೆ.