ಪ್ರಜಾಸ್ತ್ರ ಸುದ್ದಿ
ಸಿಂದಗಿ: ಆರು ಊರು ಗೆಳೆಯರ ಬಳಗದ ಸಹಯೋಗದಲ್ಲಿ ಮಡಿವಾಳ ಮಾಚಿದೇವ ವಚನ ಮಂಟಪದಿಂದ ಆಯೋಜಿಸಲಾಗಿದ್ದ ‘ವಚನ ಓದು ಹಾಗೂ ವಿಶ್ಲೇಷಣೆ’ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಮಂಗಳವಾರ ಸಂಜೆ ನಡೆಯಿತು. ಪಟ್ಟಣದ ಬಸವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಬಹುಮಾನ ವಿತರಣೆ ಮಾಡಿದ್ರು.
ಮುಖ್ಯ ಅತಿಥಿಗಳಾಗಿ ಭಾಗವಾಹಿಸಿದ್ದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಓಂಕಾರ ಕಾಕಡೆ ಮಾತ್ನಾಡಿ, ಮನುಕುಲಕ್ಕೆ ಶರಣರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಜಾತಿ ವ್ಯವಸ್ಥೆಯನ್ನ ಒಡೆದು ಸಮ ಸಮಾಜದ ಪರಿಕಲ್ಪನೆಯನ್ನ ಕಟ್ಟಿಕೊಟ್ಟಿದ್ದಾರೆ. ಆದ್ರೆ, ಇಂದು ವಿವಿ ಕುಲಪತಿ ಮಾಡಲು, ಮಂತ್ರಿ ಮಾಡುವುದು ಸೇರಿದಂತೆ ಯಾವುದೇ ಪದವಿ ನೀಡಲು ಪ್ರತಿಭೆಯನ್ನ ಗುರುತಿಸದೆ ಜಾತಿ ನೋಡಲಾಗ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ರು.
ಇಂತಹ ಸಂದರ್ಭದಲ್ಲಿ ಯುವ ಗೆಳೆಯರು ತೆರೆ ಮರೆಗೆ ಸರಿದು ಹೋಗ್ತಿರುವ ಶರಣರನ್ನ ಮತ್ತೆ ಮುಂಚೂಣಿಯಲ್ಲಿ ತರುವ ಮೂಲಕ ಮುಂದಿನ ಪೀಳಿಗೆಗೆ ದಾಟಿಸಿಕೊಂಡು ಹೋಗುವ ಕೆಲಸ ಮಾಡ್ತಿರುವುದು ಶ್ಲಾಘನೀಯ ಎಂದರು. ಮತ್ತೋರ್ವ ಮುಖ್ಯಅತಿಥಿ ಶಾಸಕ ಎಂ.ಸಿ ಮನಗೂಳಿ ಮಾತ್ನಾಡಿ, ಜನರು ಬರೀ ಹಣದ ಹಿಂದೆ ಬೆನ್ನು ಹತ್ತಿದ್ದಾರೆ. ಅದನ್ನ ಬಿಟ್ಟು, ಈ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಶರಣರು ನೀಡಿದ ಸಂದೇಶವನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಧಾರವಾಡದ ಜಿ.ಆರ್ ಗ್ರೂಪ್ ಮುಖ್ಯಸ್ಥರಾದ ಶಿವಾನಂದ ಪಾಟೀಲ ಸೋಮಜಾಳ ಮಾತ್ನಾಡಿದ್ರು.
ಹಿರಿಯ ಸಂಶೋಧಕರು ಹಾಗೂ ತೀರ್ಪುಗಾರರಾದ ಡಾ.ಎಂ.ಎಂ ಪಡಶೆಟ್ಟಿ ಮಾತ್ನಾಡಿ, ವಚನಗಳನ್ನ ಓದುವುದು ಹೇಗೆ? ಅದನ್ನ ವಿಶ್ಲೇಷಣೆ ಮಾಡುವ ಸಂದರ್ಭದಲ್ಲಿ ಅನುಸರಿಸಬೇಕಾದ ಸೂತ್ರಗಳೇನು ಅನ್ನೋ ಸಲಹೆ ನೀಡಿದ್ರು. 30ಕ್ಕೂ ಹೆಚ್ಚು ಜನ ಸ್ಪರ್ಧಿಗಳಲ್ಲಿ ಅಂತಿಮವಾಗಿ ಬಂದ 14 ಜನರಲ್ಲಿ ತುಂಬಾ ಪೈಪೋಟಿ ಇತ್ತು. ಅರ್ಧ ಅಂಕದಲ್ಲಿ ಪೈಪೋಟಿ ನಡೆದಿದ್ರಿಂದ ಪ್ರಥಮ ಇಬ್ಬರಿಗೆ, ದ್ವಿತೀಯ ಇಬ್ಬರಿಗೆ ಹಾಗೂ ತೃತೀಯ ಒಬ್ಬರಿಗೆ ನೀಡಲಾಯ್ತು ಎಂದರು.
ಪ್ರಜಾಸ್ತ್ರ ವೆಬ್ ಪತ್ರಿಕೆ ಸಂಪಾದಕ ಹಾಗೂ ಮಡಿವಾಳ ಮಾಚಿದೇವ ವಚನ ಮಂಟಪದ ಕಾರ್ಯದರ್ಶಿ ನಾಗೇಶ ತಳವಾರ ಪ್ರಾಸ್ತಾವಿಕವಾಗಿ ಮಾತ್ನಾಡಿದ್ರು. ಇದೇ ವೇಳೆ ಕಳೆದ 32 ವರ್ಷಗಳಿಂದ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿಕೊಂಡು ಬರ್ತಿರುವ ಹಿರಿಯ ಪತ್ರಕರ್ತರಾದ ಶಾಂತೂ ಹಿರೇಮಠ ಅವರನ್ನ ವಿಶೇಷವಾಗಿ ಸನ್ಮಾನಿಸಲಾಯ್ತು. ಡಾ.ವಿ.ಡಿ ಐಹೊಳೆ ಹಾಗೂ ಜಗದೀಶ ಪಾಟೀಲ ಅವರು ಪ್ರಥಮ ಸ್ಥಾನ ಹಂಚಿಕೊಂಡರು. ಸುಕೃತಾ ಪಟ್ಟಣಶೆಟ್ಟಿ ಹಾಗೂ ಪಲ್ಲವಿ ಬಾಗೇವಾಡಿ ದ್ವಿತೀಯ ಸ್ಥಾನ ಹಂಚಿಕೊಂಡರು. ಸಾಧನಾ ಸಿಂಧೆ ತೃತೀಯ ಸ್ಥಾನ ಪಡೆದರು.
ಇದೇ ವೇಳೆ ಮಡಿವಾಳ ಮಾಚಿದೇವ ವಚನ ಮಂಟಪದ ಸಂಸ್ಥಾಪಕ ಅಧ್ಯಕ್ಷ ಚಂದ್ರಕಾಂತ ಸೊನ್ನದ, ಅಧ್ಯಕ್ಷ ಮಡು ಕರದಾಳಿ, ಖಜಾಂಚಿ ಗುರುರಾಜ ಪಡಶೆಟ್ಟಿ, ಖ್ಯಾತ ಹಿರಿಯ ಕಥೆಗಾರರಾದ ಡಾ.ಚನ್ನಪ್ಪ ಕಟ್ಟಿ, ಸುಭಾಸಗೌಡ ಪಾಟೀಲ, ಪ್ರಶಾಂತ ಪಾಟೀಲ, ಸಿದ್ದು ಬುಳ್ಳಾ, ಶಿವು ಕಲ್ಲೂರ, ಮಲ್ಲು ಹಿರೋಳ್ಳಿ, ಮಹಾಂತೇಶ ಕಲಶಟ್ಟಿ, ಗೌರೀಶ ಹೈಯಾಳಕರ ಸೇರಿದಂತೆ ಅನೇಕರು ಉಪಸ್ಥಿತರಿದ್ರು. ಜಗದೀಶ ಪಾಟೀಲ ನಿರೂಪಿಸಿದ್ರು. ಶಶಿಧರ ಹೊನ್ನಳ್ಳಿ ವಂದಿಸಿದ್ರು.