ಪ್ರಜಾಸ್ತ್ರ ಸುದ್ದಿ
ನವದೆಹಲಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿನ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಜುಲೈ 26ರ ಸಂಜೆ 5 ಗಂಟೆಯ ತನಕ ಸಮೀಕ್ಷೆ ನಡೆಸದಂತೆ ಸೂಚಿಸಿದೆ.
ಮಸೀದಿಯ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ವಾರಣಾಸಿಯ ಕೋರ್ಟ್ ವೈಜ್ಞಾನಿಕ ಸಮೀಕ್ಷೆಗೆ ಶುಕ್ರವಾರ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹೋಗಲಾಗಿತ್ತು. ಇಂದು ನಡೆದ ವಿಚಾರಣೆಯಲ್ಲಿ ಬುಧವಾರ ಸಂಜೆಯ ತನಕ ಸಮೀಕ್ಷೆ ನಡೆಸದಂತೆ ತಡೆ ನೀಡಲಾಗಿದೆ.
ಇಂದು ಮುಂಜಾನೆ ಸುಮಾರು 30 ಪುರಾತತ್ವ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ನಡೆಸಲು ಶುರು ಮಾಡಿದ್ದರು. ಹೀಗಾಗಿ ಮಸೀದಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತಿ ಮಾಡಲಾಗಿತ್ತು. ದೇವಸ್ಥಾನದ ಮೇಲೆ ಮಸೀದಿ ನಿರ್ಮಿಸಲಾಗಿದೆ. ಒಳಗಡೆ ಶಿವಲಿಂಗವಿದೆ ಎಂದು ಆರೋಪಿಸಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಹೀಗಾಗಿ ವೈಜ್ಞಾನಿಕ ಸಮೀಕ್ಷೆಗೆ ವಾರಣಾಸಿ ಕೋರ್ಟ್ ಆದೇಶಿಸಿತ್ತು.