ಪ್ರಜಾಸ್ತ್ರ ಸುದ್ದಿ
ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚನೆಯಾಗಲು ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ, ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿಯಿಂದ ದೂರ ಸರಿಯಲು ನಿರ್ಧರಿಸಿದ್ದಾರಂತೆ. ಹೀಗಾಗಿ ಬಿಜೆಪಿ ನಡೆಸುತ್ತಿರುವ ಸಂಕಲ್ಪ ಯಾತ್ರೆ ಸೇರಿ ಯಾವುದೇ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುತ್ತಿಲ್ಲವೆಂದು ತಿಳಿದು ಬಂದಿದೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ರಮೇಶ್ ಜಾರಕಿಹೊಳಿ ನೀರಾವರಿ ಖಾತೆ ಸಚಿವರಾಗಿದ್ದರು. ನಂತರ ಇವರ ರಾಜಕೀಯ ಜೀವನ ಅಲ್ಲೋಲ ಕಲ್ಲೋಲ ಮಾಡುವ ವಿಡಿಯೋವೊಂದು ಬಿಡುಗಡೆಯಾಯಿತು. ಕೇಸ್ ಆಯಿತು. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು. ಆದರೆ, ಯಡಿಯೂರಪ್ಪ ಬಳಿಕ ಬೊಮ್ಮಾಯಿ ಸಿಎಂ ಆದ ಸಂದರ್ಭದಲ್ಲಿಯೂ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿಲ್ಲ.
ಸಚಿವ ಸಂಪುಟ ವಿಸ್ತರಣೆಯಾಗಲಿ, ಪುನರ್ ರಚನೆಯಾಗಲಿ ಮಾಡದ ಬಿಜೆಪಿ ಹೈಕಮಾಂಡ್ ದಿನಗಳನ್ನು ದೂಡುತ್ತಿದೆ. ಹೀಗಾಗಿ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರಂತೆ. ಜೆಡಿಎಸ್ ನಾಯಕ ಕುಮಾರಸ್ವಾಮಿ ಜೊತೆಗೆ ಎರಡು ಸುತ್ತಿನ ಮಾತುಕತೆ ನಡೆದಿದ್ದು ಬಿಜೆಪಿ ತೊರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. 27 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿಯ ಜಾರಕಿಹೊಳಿ ಜೆಡಿಎಸ್ ಗೆ ಬಂದರೆ ಆ ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಿಸಬಹುದು ಅನ್ನೋದು ಕುಮಾರಸ್ವಾಮಿ ಲೆಕ್ಕಾಚಾರ. ಹೀಗಾಗಿ ಹಲವು ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.