ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಭರ್ಜರಿ ಮಳೆಗೆ 13 ಅಮಾಯಕ ಜೀವಗಳು ಬಲಿಯಾಗಿವೆ. ಇದರ ಜೊತೆಗೆ 16 ಜಿಲ್ಲೆಗಳ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಇದ್ರಿಂದಾಗಿ ಮಳೆ ಅಂದ್ರೆ ಸಾಕು ಬೆಚ್ಚಿಬೀಳುವ ಸ್ಥಿತಿ ನಿರ್ಮಾಣವಾಗಿದೆ.
ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಯಡಿಯೂರಪ್ಪ ನಡೆಸಿದ ವಿಡಿಯೋ ಸಂವಾದದ ವೇಳೆ ಈ ವರದಿ ಬಹಿರಂಗಗೊಂಡಿದೆ. ಸಿಎಂ ಅವರು 10 ನಿಮಿಷ ಸಂವಾದ ನಡೆಸಿ, ಮುಖ್ಯ ಕಾರ್ಯದರ್ಶಿಗೆ ಮುಂದುವರೆಸುವಂತೆ ಸೂಚಿಸಿ, ಉಪ ಚುನಾವಣೆಯ ಸಭೆಯತ್ತ ತೆರಳಿದ್ರು.
ರಾಜ್ಯದ 16 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ಜನರ ಬದುಕು ಮತ್ತಷ್ಟು ಹೈರಾಣಾಗಿದೆ. ಇನ್ನು ಮಳೆಯ ಆಟ ನಿಂತಿಲ್ಲ. ಇದರ ನಡುವೆ ಎರಡು ದಿನಗಳಲ್ಲಿ ಮಳೆ ಸೃಷ್ಟಿಸಿದ ಅವಾಂತರಕ್ಕೆ 13 ಜನ ಸಾವನ್ನಪ್ಪಿದ್ದಾರೆ. 10 ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಗೆ ಒಳಗಾಗಿವೆ. 28 ಕಡೆ ಪರಿಹಾರ ಕೇಂದ್ರಗಳನ್ನ ತೆರೆಯಲಾಗಿದೆ. ಇವುಗಳಲ್ಲಿ 7,220 ಜನ ಆಶ್ರಯ ಪಡೆದಿರುವುದು ತಿಳಿದು ಬಂದಿದೆ.
ಪ್ರಕೃತಿಯ ವೈಚಿತ್ರ ಹೇಗಿದೆ ಅಂದ್ರೆ, ರಾಜ್ಯದ 16 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಮೇಲಿಂದ ಮೇಲೆ ಆಗ್ತಿದೆ. ಇನ್ನೊಂದು ಕಡೆ 14 ಜಿಲ್ಲೆಗಳ 49 ತಾಲೂಕುಗಳಲ್ಲಿ ಬರಗಾಲ ಮೂಡಿದೆ. ರಾಜ್ಯ ಸರ್ಕಾರವೇ 49 ತಾಲೂಕುಗಳನ್ನ ಬರ ಪೀಡಿತ ಪ್ರದೇಶಗಳೆಂದು ಘೋಷಿಸಿದೆ.