ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಲಾಗಿದೆ ಎಂದು ಆರೋಪಿಸಿ ಮನೆ ತೆರವಿಗೆ ಮುಂದಾಗಿದ್ದ ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ನೀಡಿ ತಡೆಯಾಜ್ಞೆ ನೀಡಿದೆ.
ಮುನ್ನೇಕೊಳಾಲಿನ ವೀರಪ್ಪರೆಡ್ಡಿ ಬಡಾವಣೆಯಲ್ಲಿನ ಎನ್.ಅನಿಲ್ ಎಂಬುವರ ಮನೆ ತೆರವಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕಳೆದ ಮೂರು ತಿಂಗಳ ಹಿಂದೆ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಸರ್ವೇ ನಂಬರ್ 35(1)ಬಿನಲ್ಲಿ ಯಾವುದೇ ಒತ್ತುವರಿ ಆಗಿಲ್ಲ. ಅದು ಖಾಸಗಿ ಜಾಗ ಎಂದು ತಿಳಿಸಿದ್ದಾರೆ. ಆದರೆ, ಸೆಪ್ಟೆಂಬರ್ 13ರಂದು ಸರ್ವೇ ನಡೆಸಿ ಶೇಕಡ 60ರಷ್ಟು ಜಾಗ ಒತ್ತುವರಿಯಾಗಿದೆ ಎಂದಿದ್ದಾರೆ ಅಂತಾ ತಿಳಿಸಿದ್ದಾರೆ.
ವಾಸ್ತವವಾಗಿ ಕಳೆದ 50 ವರ್ಷಗಳ ಹಿಂದೆ ಈ ಜಾಗ ಖರೀದಿಸಿ ಮನೆ ನಿರ್ಮಿಸಿಕೊಂಡಿದ್ದಾರೆ. ಇದುವರೆಗೂ ಒತ್ತುವರಿ ಮಾಡಿಕೊಂಡಿರುವ ಸಂಬಂಧ ಯಾವುದೇ ಆರೋಪಗಳಿಲ್ಲ. ಆದರೆ, ಸೆಪ್ಟೆಂಬರ್ 13ರಂದು ನಡೆಸಿದ ಸರ್ವೇಯಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಹೀಗಾಗಿ ಮನೆಯವರಿಗೆ ಸೂಚನೆ ನೀಡದೆ ಮನೆ ತೆರವುಗೊಳಿಸಬಾರದು ಎಂದಿರುವ ನ್ಯಾಯಮೂರ್ತಿ ಹೇಮಂತ್ ಚಂದನಗೌಡ ಅವರ ಏಕ ಸದಸ್ಯಪೀಠ ವಿಚಾರಣೆಯನ್ನು ಸೆಪ್ಟೆಂಬರ್ 16ಕ್ಕೆ ಮುಂದೂಡಿದೆ.