ಪ್ರಜಾಸ್ತ್ರ ಸುದ್ದಿ
ರಾಯಚೂರು: ಕಳೆದ 10 ದಿನಗಳ ಹಿಂದೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಬೈಕ್ ಗೆ ವಾಹನವೊಂದು ಗುದ್ದಿ ಹೋಗಿತ್ತು. ಆದರೆ, ಅದು ಯಾವುದು ಅನ್ನೋದು ಗೊತ್ತಾಗಿರಲಿಲ್ಲ. ಲಿಂಗಸೂರು ಠಾಣೆ ಪೊಲೀಸರ ಸತತ ಪ್ರಯತ್ನದ ಫಲವಾಗಿ ಇದೀಗ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಕಳೆದ 10 ದಿನಗಳ ಹಿಂದೆ ನಾಗೇಶ ಹಾಗೂ ದೇವರಾಜ ಅನ್ನೋ ಯುವಕರು ಹಟ್ಟಿ ಚಿನ್ನದ ಗಣಿಯಲ್ಲಿ ಸ್ನೇಹಿತನ ಹುಟ್ಟು ಹಬ್ಬಕ್ಕೆ ಬೈಕ್ ಮೇಲೆ ಹೋಗುತ್ತಿದ್ದಾಗ ಕಲಬುರಗಿ-ಬೆಂಗಳೂರು ಹೆದ್ದಾರಿಯಲ್ಲಿ ಹೆಣವಾಗಿದ್ದರು. ಹಿಟ್ ಆಂಡ್ ರನ್ ಕೇಸ್ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆಗೆ ಇಳಿದರು. ಇದಕ್ಕಾಗಿ 100ಕ್ಕೂ ಹೆಚ್ಚು ಬಸ್, ಲಾರಿಗಳ ತಪಾಸಣೆ ನಡೆಸಿದರು.
ಅಪಘಾತ ನಡೆದ ಸ್ಥಳದಲ್ಲಿ ಕೆಎಸ್ಆರ್ ಟಿಸಿ ಬಸ್ ನ ಸುಳಿವು ಸಿಕ್ಕಿತ್ತು. ಕಲಬುರಗಿಯ ಕಾಳಗಿ ಡಿಪೋದ ಬಸ್ ಲಿಂಗಸ್ಗೂರಿನಲ್ಲಿ ಎಂಟ್ರಿ ಪಡೆದುಕೊಂಡಿತು. ವಾಪಸ್ ಹೋಗುವಾಗ ಹಿಮ್ಮುಖವಾಗಿ ಹೋಗಿತ್ತು. ಯಾಕಂದರೆ, ಅಪಘಾದಲ್ಲಿ ಬಸ್ಸಿನ ಮುಂಭಾಗ ಜಖಂ ಆಗಿತ್ತು. ಇದು ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿತ್ತು. ಮುಂದೆ ಆತ ಬೆಂಗಳೂರು ಮಾರ್ಗದಲ್ಲಿ ಬರುವ ಯಾವ ಬಸ್ ನಿಲ್ದಾಣದಲ್ಲಿಯೂ ಎಂಟ್ರಿ ಮಾಡಿಸಿರಲಿಲ್ಲ.
ಮುಂದೆ ಬೆಂಗಳೂರಿನ ಕೆಂಗೇರಿಯಲ್ಲಿನ ಗ್ಯಾರೇಜ್ ವೊಂದಲ್ಲಿ ರೀ ಪೇಂಟ್ ಮಾಡಿಸಿ ಬಸ್ ತಂದು ನಿಲ್ಲಿಸಿದ್ದ. ಲಿಂಗಸ್ಗೂರು ಪೊಲೀಸರು ಸತತ 15 ದಿನಗಳ ಕಾಲ ತನಿಖೆ ನಡೆಸಿ 2000 ಕಿಲೋ ಮೀಟರ್ ಸಂಚಾರ ಮಾಡಿ ಬಸ್ ಚಾಲಕ ಶ್ರೀಕಾಂತ್ ಎಂಬಾತನನ್ನು ಇದೀಗ ಬಂಧಿಸಿದ್ದಾರೆ. ಅಲ್ಲಿಗೆ ಹಿಟ್ ಅಂಡ್ ರನ್ ಕೇಸಿಗೆ ಅಂತ್ಯ ಸಿಕ್ಕಿದೆ.