ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಟ ಸುದೀಪ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವುದಕ್ಕೆ ತೆರೆ ಬಿದ್ದಿದೆ. ಇಲ್ಲಿ ಅವರು ಬಿಜೆಪಿ ಸೇರುತ್ತಿಲ್ಲ. ಬದಲಾಗಿ ಸಿಎಂ ಬೊಮ್ಮಾಯಿ ಅವರ ಜೊತೆಗಿನ ಸಂಬಂಧದಿಂದಾಗಿ ಅವರ ಪರ ನಿಲ್ಲುತ್ತೇನೆ ಎಂದಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಕಷ್ಟದ ದಿನಗಳಲ್ಲಿ ಬೊಮ್ಮಾಯಿ ಮಾಮ ನನ್ನ ಜೊತೆ ನಿಂತಿದ್ದಾರೆ. ನಾನು ಅವರ ಪರ ನಿಲ್ಲುತ್ತೇನೆ ಎಂದರು.
ಬಿಜೆಪಿ ತತ್ವ ಸಿದ್ಧಾಂತ ಒಪ್ಪುತ್ತೀರಾ ಅನ್ನೋ ಪ್ರಶ್ನೆ ಉತ್ತರಿಸಿದ ಅವರು, ಒಬ್ಬರು ಸಹಾಯ ಬೇಕು ಅಂದರೆ ನಾನು ಅವರ ಪರ ನಿಲ್ಲುತ್ತೇನೆ. ಒಬ್ಬ ವ್ಯಕ್ತಿಯ ಪರ ನಿಲ್ಲುತ್ತೇವೆ ಎಂದ ಮೇಲೆ ಪಕ್ಷದ ಪರ ನಿಲ್ಲುತ್ತೇವೆ ಎಂದರ್ಥ ಎಂದು ಹೇಳುವ ಮೂಲಕ ಬಿಜೆಪಿ ಪರ ಈ ಬಾರಿಯ ಚುನಾವಣೆಯಲ್ಲಿ ಕೆಲಸ ಮಾಡುವುದಾಗಿ ಹೇಳಿದರು.
ನಾನು ಎಲ್ಲರ ಪರ ಕ್ಯಾಂಪೇನ್ ಮಾಡಲು ಆಗುವುದಿಲ್ಲ. ನಾನು ಬಂದಿರುವುದು ಬೊಮ್ಮಾಯಿ ಮಾಮನಿಗೋಸ್ಕರ. ಅವರು ಹೇಳಿದರೆ ಇತರರ ಪರನೂ ಕ್ಯಾಂಪೇನ್ ಮಾಡುತ್ತೇನೆ ಎಂದರು. ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪವಿದೆ ಅನ್ನೋ ಪ್ರಶ್ನೆಗೆ, ಇದರ ಬಗ್ಗೆ ಮಾತನಾಡುವುದಿಲ್ಲ. ಆರೋಪಗಳನ್ನು ಕೋರ್ಟ್ ನೋಡಿಕೊಳ್ಳುತ್ತೆ ಎಂದರು.
ಸಿಎಂ ಬೊಮ್ಮಾಯಿ ಮಾತನಾಡಿ, ಸುದೀಪ್ ಬಿಜೆಪಿ ಸೇರುತ್ತಿಲ್ಲ. ನನ್ನ ಅವರ ಸಂಬಂಧ ಗೌರವಿಸಿ ನನ್ನ ಪರ ನಿಲ್ಲುತ್ತಿದ್ದಾರೆ. ನಿಮಗೋಸ್ಕರ ನಿಲ್ಲುತ್ತೇನೆ. ಪ್ರಚಾರ ಮಾಡುತ್ತೇನೆ ಎಂದಿದ್ದಾರೆ. ಸುದೀಪ್ ನಮ್ಮ ಜೊತೆ ಬಂದಿರುವುದು ತುಂಬಾ ಖುಷಿಯಾಗಿದೆ. ನಮ್ಮ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ. ಅವರಿಗೆ ಧನ್ಯವಾದಗಳು ಎಂದರು. ಈ ವೇಳೆ ಸಚಿವರಾದ ಡಾ.ಕೆ.ಸುಧಾಕರ್, ಆರ್.ಅಶೋಕ್, ಮುನಿರತ್ನ ಉಪಸ್ಥಿತರಿದ್ದರು.