ಪ್ರಜಾಸ್ತ್ರ ಸುದ್ದಿ
ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರ ಈ ಬಾರಿ ಅಚ್ಚರಿ ಮೇಲೆ ಅಚ್ಚರಿಗಳಿಗೆ ಕಾರಣವಾಗುತ್ತಿದೆ. ಕಾಂಗ್ರೆಸ್ ಟಿಕೆಟ್ ಗಾಗಿ ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಮಧ್ಯೆ ಟಿಕೆಟ್ಗಾಗಿ ಪೈಪೋಟಿ ಏರ್ಪಟ್ಟಿತ್ತು. ಆದರೆ, ಇದೀಗ ತಮಟಗಾರ್ ಲೆಕ್ಕಾಚಾರ ಉಲ್ಟಾ ಆಗಿದೆಯಂತೆ.
ಇದೇ ಕ್ಷೇತ್ರ ಪ್ರತಿನಿಧಿಸಿ ಶಾಸಕರಾಗಿ ಸಚಿವರೂ ಆಗಿದ್ದ ಈಗ ಧಾರವಾಡ ಜಿಲ್ಲೆಯಿಂದ ಹೊರಗಿರುವ ವಿನಯ್ ಕುಲಕರ್ಣಿ 2023ರ ವಿಧಾನಸಭಾ ಚುನಾವಣೆಗೆ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಪಕ್ಕಾ ಆದಂತಾಗಿದೆ. ಹೀಗಾಗಿ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಇಸ್ಮಾಯಿಲ್ ತಮಟಗಾರಗೆ ನಿರಾಸೆಯುಂಟಾಗಿದ್ದು, ಅವರು ಮರಳಿ ಜೆಡಿಎಸ್ ಸೇರ್ಪಡೆಗೊಂಡು ಇದೇ ಕ್ಷೇತ್ರದಿಂದ ಸ್ಪರ್ಧೆ ನಡೆಸಲು ಮುಂದಾಗಿದ್ದಾರೆ.
ತಮಟಗಾರ ಕಳೆದ ಎರಡು ವರ್ಷಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಓಡಾಡಿ ಗುರುತಿಸಿಕೊಂಡಿದ್ದಾರೆ. ವಿನಯ್ ಕುಲಕರ್ಣಿ ಜಿಲ್ಲೆಯಿಂದ ಹೊರಗಿರುವುದರಿಂದ ಕಾಂಗ್ರೆಸ್ ಟಿಕೆಟ್ ತಮಗೇ ಸಿಗುತ್ತೆ ಎಂಬ ಹುಮ್ಮಸ್ಸಿನಲ್ಲಿದ್ದರು. ಆದರೆ, ಟಿಕೆಟ್ ವಿನಯ್ ಅವರಿಗೆ ಬಹುತೇಕ ಖಚಿತವಾಗಿದ್ದರಿಂದ ದೆಹಲಿಯಿಂದ ಇಸ್ಮಾಯಿಲ್ ಬರಿಗೈಯಲ್ಲಿ ಬರುವುದಲ್ಲದೇ ಕಾಂಗ್ರೆಸ್ಗೆ ಭಾರೀ ಶಾಕ್ ನೀಡಿದ್ದಾರೆ.
ಆರು ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು ಸೇರಿದಂತೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯ 8 ಜನ ಸದಸ್ಯರೊಂದಿಗೆ ಇಸ್ಮಾಯಿಲ್ ಮರಳಿ ಜೆಡಿಎಸ್ಗೆ ಸೇರ್ಪಡೆಗೊಳ್ಳುತ್ತಿರುವುದರಿಂದ ಕಾಂಗ್ರೆಸ್ಗೆ ಬಿಗ್ ಶಾಕ್ ನೀಡಿದ್ದಾರೆ. ಅಲ್ಲದೇ ಜೆಡಿಎಸ್ನಿಂದ ಇಸ್ಮಾಯಿಲ್ ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿದ್ದಾರಂತೆ. ಹೀಗಾಗಿ ಒಂದಿಷ್ಟು ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ನಿಂದ ದೂರಾಗುವ ಸಾಧ್ಯೆಗಳಿವೆ.