ಪ್ರಜಾಸ್ತ್ರ ಸುದ್ದಿ
ಮೈಸೂರು: ಜೆಡಿಎಸ್ ಶಾಸಕ ಸಾ.ರಾ ಮಹೇಶ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಗುದ್ದಾಟ ಇನ್ನು ನಿಂತಿಲ್ಲ. ರೋಹಿಣಿ ಸಿಂಧೂರಿ ಬಗ್ಗೆ ಸಿನ್ಮಾ ಬರ್ತಿದೆ ಅನ್ನೋ ವಿಚಾರ ಪ್ರಸ್ತಾಪಿಸಿದ ಅವರು, ನಾವು ಒಂದು ಸಿನ್ಮಾ ಮಾಡುತ್ತೇವೆ. ಸಿಬಿಐ ವರದಿ ಆಧರಿಸಿ ಡಿ.ಕೆ ರವಿ ಬಗ್ಗೆ ಸಿನಿಮಾ ಮಾಡುತ್ತೇವೆ ಎಂದು ಕಾಲೆಳೆದರು.
ಬಡ ರೈತನ ಮಗ ಆಂಧ್ರದ ಅಧಿಕಾರಿಯ ಸಹವಾಸ ಮಾಡಿ ಏನೆಲ್ಲ ಆದ ಅನ್ನೋದರ ಸಿನಿಮಾ ಮಾಡುತ್ತೇವೆ. ಅದನ್ನ ನಾನೇ ನಿರ್ಮಾಣ ಮಾಡುತ್ತೇನೆ ಎಂದು ಹೇಳುವ ಮೂಲಕ ವ್ಯಂಗ್ಯವಾಡಿದ್ರೋ, ಬೆದರಿಕೆ ಹಾಕಿದ್ರೂ ಗೊತ್ತಿಲ್ಲ. ಒಟ್ಟಿನಲ್ಲಿ ರೋಹಿಣಿ ವಿರುದ್ಧದ ವಾಗ್ದಾಳಿ ಮುಂದುವರೆಸಿದ್ದಾರೆ.
ಯಾವ ಅಧಿಕಾರಿ, ರಾಜಕಾರಣಿಯ ಮನೆಗೆ ಬರದಷ್ಟು ಲೈಟ್ ಬಿಲ್ ಇವರ ಮನೆಗೆ ಬಂದಿದೆ. ರೈತರು ವಿದ್ಯುತ್ ಇಲ್ಲವೆಂದು ಬಳಲುತ್ತಿದ್ದಾರೆ. ಇವರು ಸರ್ಕಾರದ ಸೌಲಭ್ಯಗಳನ್ನು ಬಳಸಿ ದುರ್ಬಳಕೆ ಮಾಡಿಕೊಂಡಿದ್ದಾರೆ. ತಿಂಗಳಿಗೆ 50 ಸಾವಿರ ರೂಪಾಯಿ ಲೈಟ್ ಬಿಲ್ ಬಂದಿದೆ. ಇದು ಓರ್ವ ಸೆಕೆಂಡ್ ಕ್ಲಾಸ್ ಅಧಿಕಾರಿಯ ವೇತನ ಎಂದು ಕಿಡಿ ಕಾರಿದ್ರು. ಅಲ್ದೇ, ಈಜುಕೊಳ ನಿರ್ಮಾಣದ ಬಗ್ಗೆಯೂ ಕೆಂಡ ಕಾರಿದ್ರು.
ರೋಹಿಣಿ ಸಿಂಧೂರಿ ವಿರುದ್ಧ 10 ಆರೋಪಗಳಿರುವ ಕುರಿತು ಸಿಎಂಗೆ ಪತ್ರ ಬರೆದಿದ್ದೇನೆ. ರಾಜ್ಯದ ದೇವಾಲಯಗಳು ಕುಸಿದು ಬೀಳುತ್ತಿದ್ದರೂ ಆಂಧ್ರಕ್ಕೆ 200 ಕೋಟಿ ನೀಡಿದ್ರು. 4ಜಿ ವಿನಾಯಿತಿಯಲ್ಲಿ ಹಣ ಬಿಡುಗಡೆಯಾಗಿದೆ. 16 ಲಕ್ಷ ಖರ್ಚು ಮಾಡಿ ಪಾರಂಪರಿಕ ಕಟ್ಟಡ ನವೀಕರಣಗೊಳಿಸಿದ್ದಾರೆ. ಈಜುಕೊಳ, ಜಿಮ್ ನಿರ್ಮಿಸಿದ್ದಾರೆ. ಈಜುಕೊಳಕ್ಕೆ ಕುಡಿಯುವ ನೀರು ಬಳಸಿದ್ದಾರೆ. ಜಿಲ್ಲಾಧಿಕಾರಿ ಮನೆಯಲ್ಲಿ 3 ಕೆಇಬಿ ಮೀಟರ್ ಇವೆ. ಹೀಗೆ 10 ಆರೋಪಗಳ ಪತ್ರ ಬರೆದಿದ್ದೇನೆ ಎಂದರು. ಸಿನಿಮಾಗಳಲ್ಲಿ ರಾಜಕಾರಣಿಗಳನ್ನ ಕೆಟ್ಟವರೆಂದು ತೋರಿಸ್ತಾರೆ. ಮೈಸೂರಿನಲ್ಲಿ ಒಳ್ಳೆಯವರು ಇಲ್ವಾ? ಅವರೆ ಕ್ರಿಯೇಟ್ ಮಾಡಿಕೊಂಡಿರುವ ಪೇಸ್ ಬುಕ್ ಅಕೌಂಟ್ ನಲ್ಲಿ ದಾಖಲೆ ಬಹಿರಂಗಪಡಿಸಲಿ ಎಂದು ವಾಗ್ದಾಳಿ ನಡೆಸಿದ್ರು.