ಅಥಣಿ: ಲಾಕ್ ಡೌನ ನಡುವೆಯೂ ಅಕ್ರಮ ಮರಳು ಸಾಗಾಟ ಮುಂದುವರೆದಿದ್ದು, ಅದನ್ನ ತಡೆಯಲು ಹೋಧ ತಹಶೀಲ್ದಾರ್ ದುಂಡಪ್ಪ ಕೋಮಾರ ಮೇಲೆ ವಾಹನ ಚಲಾಯಿಸಿ ಹತ್ಯೆ ನಡೆಸುವ ಯತ್ನ ಮಾಡಲಾಗಿದೆ.
ತಾಲೂಕಿನ ಶಿರೂರ ಹಾಗೂ ಖಿಳೆಗಾಂವ ಬಾಳು ಹಜಾರೆ ಎಂಬಾತ, ತಹಶೀಲ್ದಾರ್ ಮೇಲೆ ಟ್ರ್ಯಾಕ್ಟರ್ ಚಲಾಯಿಸಿ ಹತ್ಯೆಗೆ ಯತ್ನಿಸಿದ್ದು, ಈ ವೇಳೆ ಟ್ರ್ಯಾಕ್ಟರ್ ತಡೆಯಲು ಹೋದ ತಹಶೀಲ್ದಾರ್ ವಾಹನ ಚಾಲಕ ಅನೀಲ ಗಸ್ತಿ ತೀವ್ರವಾಗಿ ಗಾಯಗೊಂಡಿದ್ದಾನೆ.
ಅಕ್ರಮ ಮರಳು ದಂಧೆಯಿಂದಾಗಿ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭಯದಲ್ಲಿ ಕೆಲಸ ನಿರ್ವಹಣೆ ಮಾಡಬೇಕಾದ ಪರಿಸ್ಥತಿ ನಿರ್ಮಾಣವಾಗಿದೆ. ಈ ಬಗ್ಗೆ ಭೂ ಮತ್ತು ಗಣಿಗಾರಿಕೆ ಇಲಾಖೆಯ ಸಿಬ್ಬಂದಿ ಅಥಣಿ ತಾಲೂಕಿನ ಅಕ್ರಮಗಳ ಮಾಹಿತಿ ತಿಳಿದರೂ, ಜಾಣ ಮೌನವಹಿಸಿದ್ದು ಹಲವು ಅನುಮಾನಗಳನ್ನ ಮೂಡಿಸಿದೆ.
ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟ ತಡೆಯುವ ಹಂತದಲ್ಲಿ ಲೋಕೋಪಯೋಗಿ ಇಲಾಖೆ, ತಹಶೀಲ್ದಾರ್ ಹಾಗೂ ಪೊಲೀಸ್ ಮತ್ತು ಮೈನ್ಸ್ ಆ್ಯಂಡ್ ಜೂಆಲಜಿ ಇಲಾಖೆಗಳ ನಡುವಿನ ಸಮನ್ವಯ ಕೊರತೆಯೂ ಅಕ್ರಮ ದಂಧೆಕೋರರಿಗೆ ಲಾಭದಾಯಕವಾಗಿದೆ. ಕೃಷ್ಣಾ ನದಿಯಲ್ಲಿ ಸದ್ಯ ನೀರು ಹರಿಯದೆ ತಡೆ ಹಿಡಿಯಲಾಗಿದ್ದು ಅಗ್ರಾಣಿ ನದಿಯ ಹರಿವಿನ ಉದ್ದಗಲಕ್ಕೂ ಬರುವ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.
ಅಥಣಿ ತಾಲೂಕಿನ ಖಿಳೆಗಾಂವ-ಶಿರೂರ ನಡುವೆ ಹಳ್ಳದಲ್ಲಿ ಮರಳು ಗಣಿಗಾರಿಕೆ ಮಾಹಿತಿ ಪಡೆದ ತಹಶೀಲ್ದಾರ್ ದುಂಡಪ್ಪ ಕೋಮಾರ ಮತ್ತು ಸಿಬ್ಬಂದಿ ದಾಳಿ ನಡೆಸಿದ ವೇಳೆ ಈ ಘಟನೆ ನಡೆದಿದೆ. ಆರೋಪಿ ಬಾಳು ಹಜಾರೆ ಮತ್ತು ಇತರರು ಸ್ಥಳದಿಂದ ಪರಾರಿಯಾಗಿದ್ದು ಪ್ರಕರಣ ದಾಖಲಿಸಿಕೊಂಡ ಅಥಣಿ ಪೋಲಿಸರು ಆರೋಪಿಗಾಗಿ ಜಾಲಬೀಸಿದ್ದಾರೆ.