ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಅಯೋಧ್ಯೆಯಲ್ಲಿನ ರಾಮ ಮಂದಿರ ಉದ್ಘಾಟನೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಜನವರಿ 22ರಂದು ಕೋಟ್ಯಾಂತರ ಭಕ್ತರ ರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ಈ ಕಾರ್ಯಕ್ರಮದಿಂದ ಶಂಕರಾಚಾರ್ಯರ ನಾಲ್ಕು ಪೀಠಗಳು ದೂರ ಉಳಿಯುವುದಾಗಿ ತಿಳಿಸಿವೆ.
ಜೋಶಿ ಮಠ, ದ್ವಾರಕಾ ಮಠ, ಪುರಿ ಮಠ ಹಾಗೂ ಶೃಂಗೇರಿಯ ಮಠದ ಸ್ವಾಮೀಜಿಗಳು ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಹೇಳಲಾಗುತ್ತಿದೆ. ಪ್ರಾಣ ಪತ್ರಿಷ್ಠಾಪನೆ ಕಾರ್ಯ ಸನಾತನ ಧಾರ್ಮಿಕ ಆಚರಣೆಯಂತೆ ನಡೆಯಬೇಕು. ಆದರೆ, ಇದಕ್ಕೆ ರಾಜಕೀಯ ರಂಗ ಬೆರೆತಿದೆ. ಪ್ರಧಾನಿಯವರು ಗರ್ಭಗುಡಿಯಲ್ಲಿನ ರಾಮ ವಿಗ್ರಹವನ್ನು ಸ್ಪರ್ಶಿಸುತ್ತಾರೆ. ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳಿಂದ ಕೂಡಿರದ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲವೆಂದು 4 ಪೀಠಗಳ ಸ್ವಾಮೀಜಿಗಳು ತಿಳಿಸಿದ್ದಾರೆ.
ರಾಮಲಲ್ಲಾ ದೇವಸ್ಥಾನ ನಿರ್ಮಾಣದಲ್ಲಿ ತೊಡಗಿರುವ ಟ್ರಸ್ಟ್ ಮೂರು ಅಂತಸ್ತಿನಲ್ಲಿ ಮೊದಲ ಮಹಡಿ ಸಿದ್ಧವಾಗಿದೆ. ಉಳಿದಿದ್ದು ಮುಂದಿನ 2 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದಿದೆ. ಅಪೂರ್ಣಗೊಂಡ ದೇವಸ್ಥಾನದ ಉದ್ಘಾಟನೆಗೆ ನಾವು ಬರುವುದಿಲ್ಲ. ಇದನ್ನು ಹೇಳಿದರೆ ನಾವು ಮೋದಿ ವಿರೋಧಿ ಎನ್ನುತ್ತಾರೆ. ನಾವು ಮೋದಿ ವಿರೋಧಿಯಲ್ಲ. ಆದರೆ, ಧರ್ಮ ಶಾಸ್ತ್ರಕ್ಕೆ ವಿರುದ್ಧವಾಗಿ ಹೋಗುವುದಿಲ್ಲ. ಧಾರ್ಮಿಕ ನಿಯಮಗಳ ಆಚರಣೆಯಿಲ್ಲದ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲವೆಂದು ನಾಲ್ಕು ಪೀಠಗಳ ಸ್ವಾಮೀಜಿಗಳು ಹೇಳುತ್ತಿದ್ದಾರೆ.