ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಇಲ್ಲಿನ ಸುವರ್ಣ ಸೌಧದ ಹತ್ತಿರ ಭಾರತೀಯ ಕ್ರೈಸ್ತ್ ಒಕ್ಕೂಟದ ವತಿಯಿಂದ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಇಲ್ಲಿಗೆ ಭೇಟಿ ನೀಡಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮತಾಂತರ ನಿಷೇಧ ಕಾಯ್ದೆಗೆ ಅನುಮೋದನೆ ಪಡೆದುಕೊಳ್ಳಲು ನಾವು ಬಿಡುವುದಿಲ್ಲವೆಂದರು.
ಬಿಜೆಪಿಯವರು ಮತಾಂತರ ನಿಷೇಧ ಕಾಯ್ದೆ ತರುತ್ತೇವೆ ಎಂದಿದ್ದಾರೆ. ಮುಂದಿನವಾರ ತರುತ್ತಾರೆ ಎಂದುಕೊಂಡಿದ್ದೇನೆ. ಒಂದು ಧರ್ಮವನ್ನು ಗುರಿಯಾಗಿಟ್ಟುಕೊಂಡು ದೇಶದಲ್ಲಿ ಕೋಮು ಸೌಹಾರ್ದ ಹಾಳು ಮಾಡಲು ಹೊರಟಿದ್ದಾರೆ. ನಾವು ಇದನ್ನು ತೀವ್ರವಾಗಿ ವಿರೋಧಿಸುತ್ತೇವೆ. ಒಂದು ವೇಳೆ ಬಲವಂತದಿಂದ ತಂದರೆ 2023ರಲ್ಲಿ ನಮ್ಮ ಸರ್ಕಾರ ಬಂದ ಕೂಡಲೇ ಅದನ್ನು ವಾಪಸ್ ಪಡೆಯುತ್ತೇವೆ ಎಂದರು.
ಯಾವುದೇ ಧರ್ಮದ ಮೇಲೆ ಸಂವಿಧಾನ ರಚನೆಯಾಗಿಲ್ಲ. ಎಲ್ಲರೂ ಸಮಾನರು. ಮೊದಲು ಭಾರತೀಯರು. ನಂತರ ಜಾತಿ, ಧರ್ಮ. ಜಾತಿನೂ ನಾವು ಮಾಡಿಕೊಂಡಿರುವುದು. ದೇವರಲ್ಲ. ಯಾವುದೇ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವುದು, ಪೂಜಿಸುವುದು ಸಂವಿಧಾನ ನೀಡಿರುವ ಹಕ್ಕು ಎಂದರು. ಈ ವೇಳೆ ಮಾಜಿ ಸಚಿವ ಕೆ.ಜೆ ಜಾರ್ಜ್, ಭಾರತೀಯ ಕ್ರೈಸ್ತ್ ಒಕ್ಕೂಟದ ಅಧ್ಯಕ್ಷ ಸಜ್ಜನ ಜಾರ್ಜ್ ಸೇರಿ ಹಲವರು ಭಾಗವಹಿಸಿದ್ದರು.