ಪ್ರಜಾಸ್ತ್ರ ಸುದ್ದಿ
ಮೈಸೂರು: ಇಲ್ಲಿನ ಅರಮನೆ ಮುಂಭಾಗದ ವಿಶಾಲವಾದ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಾನವೀತೆಗಾಗಿ ಯೋಗ ಅನ್ನೋ ಘೋಷವಾಕ್ಯದೊಂದಿಗೆ ಯೋಗ ದಿನ ಆಚರಿಸಲಾಯಿತು.
ಸುಮಾರು 45 ನಿಮಿಷಗಳ ಕಾಲ ಪ್ರಧಾನಿ ಮೋದಿ ಸೇರಿದಂತೆ ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಸರ್ಬಾನಂದ್ ಸೋನಾವಲ್, ರಾಜಮಾತಾ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಸೇರಿದಂತೆ ಹಲವು ಗಣ್ಯರು ವೇದಿಕೆ ಮೇಲಿದ್ದರು.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಮಾನವೀಯ ಚೈತನ್ಯಕ್ಕಾಗಿ ಯೋಗ ಮಾಡಬೇಕು ಎಂದರು. ಕೆಲವು ವರ್ಷಗಳ ಹಿಂದೆ ಯೋಗ ಕೆಲವು ಮನೆಗಳಲ್ಲಿ, ಕೇಂದ್ರಗಳಲ್ಲಿತ್ತು. ಇದೀಗ ವಿಶ್ವದ ಮೂಲೆ ಮೂಲೆಯಲ್ಲಿದೆ. ಯೋಗ ಈಗ ಸಹಜ, ಸ್ವಾಭಾವೀಕವಾಗಿದೆ. ಕರೋನಾ ಆತಂಕದ ಎರಡು ವರ್ಷದ ನಂತರ ಯೋಗ ಪರ್ವ ಆರಂಭವಾಗಿದೆ ಎಂದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದೇಶದ 75 ಚಾರಿತ್ರಿಕ ಸ್ಥಳಗಳಲ್ಲಿ ಸಾಮೂಹಿಕ ಯೋಗ ನಡೆಯುತ್ತಿದೆ. ಇತಿಹಾಸದಲ್ಲಿ ಸಾಕಷ್ಟು ವಿಶೇಷ ಸ್ಥಾನಮಾನ ಪಡೆದಿರುವ ಮೈಸೂರು ಅರಮನೆ ಆವರಣದಲ್ಲಿ ನಡೆದ ಯೋಗ ಅಭ್ಯಾಸ ದೇಶದ ವೈವಿಧ್ಯತೆಯನ್ನು ಒಂದೇ ಸೂತ್ರದಲ್ಲಿ ಕೂಡಿಸುತ್ತದೆ ಎಂದು ಹೇಳಿದರು.
ಇದೇ ವೇಳೆ ರಾಜ್ಯದ ವಿವಿಧ ಮಂತ್ರಿಗಳು, ಶಾಸಕರು, ಸ್ಥಳೀಯ ರಾಜಕೀಯ ಮುಖಂಡರು, ಸಂಸದರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಾರ್ವನಿಕರು ಯೋಗ ದಿನದಲ್ಲಿ ಭಾಗವಹಿಸಿದ್ದರು.