ಹುಬ್ಬಳ್ಳಿ: ರಾಜ್ಯದ ಪ್ರಮುಖ ಟಿವಿ ಚಾನೆಲ್ ವರದಿಗಾರ, ಕ್ಯಾಮೆರಾಮನ್, ಪ್ರಮುಖ ಪತ್ರಿಕೆಯ ವರದಿಗಾರ ಸೇರಿದಂತೆ ಐವರು ಪತ್ರಕರ್ತರಿಗೆ ಇದೀಗ ಹೋಂ ಕ್ವಾರಂಟೈನ್ ಮಾಡಲಾಗಿದೆ. ಇವರಲ್ಲಿ ಕರೋನಾ ಸೋಂಕಿನ ಲಕ್ಷಣಗಳಿಲ್ಲ. ಆದ್ರೆ, ಮುಂಜಾಗ್ರತ ಕ್ರಮವಾಗಿ ಅವರನ್ನ ಗೃಹಬಂಧನದಲ್ಲಿ ಇಡಲಾಗಿದೆ. ಕಲಬುರಗಿ ಬಳಿಕ ಇದೀಗ ಹುಬ್ಬಳ್ಳಿಯಲ್ಲಿ ಪತ್ರಕರ್ತರು ಹೋಂ ಕ್ವಾರಂಟೈನ್ ಆಗಿದ್ದಾರೆ.
ಪತ್ರಕರ್ತರ ಗೃಹಬಂಧನಕ್ಕೆ ಕಾರಣ
ಏಪ್ರಿಲ್ 9ರಂದು ಶಬ್ ಎ ಬರಾತ್ ಆಚರಣೆಯ ವರದಿಗಾಗಿ ತೊರವಿ ಹಕ್ಕಲದ ಹತ್ತಿರದ ಸ್ಮಶಾನಕ್ಕೆ ಹೋಗಿದ್ದಾರೆ. ಸ್ಮಶಾನದ ಕಾವಲುಗಾರನಿಗೆ ಕರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಈ ಐವರು ಪತ್ರಕರ್ತರು ದ್ವಿತೀಯ ಹಂತದ ಸಂಪರ್ಕಿತರು ಎಂದು ಪರಿಗಣಿಸಿ ಹೋಂ ಕ್ವಾರಂಟೈನ್ ಮಾಡಲಾಗಿದೆ.
ಟಿವಿ ಮಾಧ್ಯಮ ಕೆಲ ದಿನ ಬಂದ್ ಮಾಡಲು ಮನವಿ
ಇನ್ನು ಮುಂಬೈನಲ್ಲಿ 53 ಪತ್ರಕರ್ತರಲ್ಲಿ ಕೋವಿಡ್ 19 ಕಾಣಿಸಿಕೊಂಡಿರುವುದು ವರದಿಯಾಗಿದೆ. ಹೀಗಾಗಿ ಮಾಧ್ಯಮಗಳನ್ನ ಕೆಲ ದಿನಗಳ ಕಾಲ ಬಂದ್ ಮಾಡಬೇಕು ಅಥವ ಸಿಮೀತ ಜನಕ್ಕೆ ಮಾತ್ರ ನೇಮಕ ಮಾಡುವಂತೆ ಸರ್ಕಾರ ಸೂಚಿಸಬೇಕು ಅನ್ನೋ ಮಾತುಗಳು ಕೇಳಿ ಬರ್ತಿವೆ.
ಅದರಲ್ಲೂ ಟಿವಿ ಮಾಧ್ಯಮ ಒಂದು ವಾರ ಬಂದ್ ಮಾಡುವುದು ಉತ್ತಮ ಎನ್ನಲಾಗ್ತಿದೆ. ಪತ್ರಿಕಾ ಮಾಧ್ಯಮದ ಬಹುತೇಕ ವರದಿಗಾರರು ವರ್ಕ್ ಫ್ರಮ್ ಹೋಂ ಮಾಡ್ತಿದ್ದಾರೆ. ಆದ್ರೆ, ಟಿವಿ ಮಾಧ್ಯಮದಲ್ಲಿ ಹಾಗೇ ಮಾಡೋದು ಕಷ್ಟಸಾಧ್ಯ. ಹೀಗಾಗಿ ಕೆಲ ಕಾಲ ಬಂದ್ ಮಾಡ್ಬೇಕು ಅಥವ ಸಿಮೀತ ಜನಕ್ಕೆ ಮಾತ್ರ ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಸಾರ್ವಜನಿಕರು ಮನವಿ ಮಾಡಿಕೊಳ್ತಿದ್ದಾರೆ. ಯಾಕಂದ್ರೆ, ಪತ್ರಕರ್ತರು ರಾಜಕಾರಣಿಗಳು, ಕರೋನಾ ವಾರಿಯರ್ಸ್ ಸೇರಿದಂತೆ ಸಾರ್ವಜನಿಕರ ಸಂಪರ್ಕದಲ್ಲಿ ಹೆಚ್ಚು ಇರುವುದ್ರಿಂದ ಸಧ್ಯಕ್ಕೆ ಬಂದ್ ಮಾಡಿಸಿ ಅನ್ನೋ ಮಾತುಗಳು ಕೇಳಿ ಬರ್ತಿವೆ.